ನನ್ನ ಬಾಲ್ಯ ನನ್ನ ಸ್ಮೃತಿ ಪಟಲದಲ್ಲಿ ಅಚ್ಚಳಿಯದೆ ಬೇರೂರಿದೆ ನಾನೋದಿದ ಕೆಲವೊಂದು ಪುಸ್ತಕಗಳು ಕೂಡ . ಒಮ್ಮೆ 'ಅಲಿಬಾಬ ಮತ್ತು ನಲವತ್ತು ಮಂದಿ ಕಳ್ಳರು' ಪುಸ್ತಕ ಹಿಡಿದು ಕುಳಿತ್ತಿದೆ ; ಹಾಗೆ ಓದುತ್ತ ಓದುತ್ತ ನನ್ನ ಕಲ್ಪನೆಯಲ್ಲಿ ಅಲಿಬಾಬ ಕಥೆ ತುಂಬಾ ಚೆನ್ನಾಗಿ ಉಳಿದು ಹೊಯಿತು. ನನ್ನ ಮಕ್ಕಳಿಗೆ ನಾನು ಚಿಕ್ಕಂದಿನಲ್ಲಿ ಓದಿದ ಎಲ್ಲ ಕತೆಗಳನ್ನು ಹೇಳುತ್ತಾ ಬಂದಿದ್ದೇನೆ. ನನ್ನ ಕಥೆ ಹೇಳುವ ವೈಖರಿ ಕಂಡು ಒಮ್ಮೊಮ್ಮೆ ನಮ್ಮ ಅತ್ತೆ ಕೂಡ ''ಅಲ್ವೇ ಉಮ ಅದೆಷ್ಟು ಚೆನ್ನಾಗಿ ಕತೆ ಹೇಳುತ್ತೀಯ ನೀನು, ನಂಗೆ ನಿದ್ದೆ ಬರ್ತಿಲ್ಲ ನಿನ್ ಕತೆ ಕೇಳಿದ್ರೆ ಒಳ್ಳೇ ನಿದ್ರೆ ಬರುತ್ತೆ ನಂಗೂ ಕತೆ ಹೇಳು ಎಂದು ಎಷ್ಟೋ ಬಾರಿ ಹೇಳುವುದು ಇತ್ತು. ನಾನು ಸಣ್ಣವಳಿದ್ದಾಗ ಓದಿದ 'ಸಿನ್ ಡ್ರೆ ಲಾ', 'ಉದ್ದ ಕೂದಲಿನ ರಾಜ ಕುಮಾರಿ ಕತೆ', 'ಎರಡು ಗಿಳಿಗಳ ಕಥೆ' , 'ಕಪ್ಪೆ ರಾಜಕುಮಾರಿ ಕಥೆ' ಹಾಗೂ ಇನ್ನು ಮುಂತಾದ ಕಥೆಗಳನ್ನು ಅವರಿಗೆ ಹೇಳಿ ಅವರ ಮನಸಂತೋಶ ಪಡಿಸುತ್ತಿದ್ದೆ . ಆಗ ನನಗಾಗುತ್ತಿದ್ದ ಆನಂದ ಅಷ್ಟಿಷ್ಟಲ್ಲ. ಮತ್ತೆ ಇನ್ನು ಖುಷಿಯ ವಿಚಾರ ಎಂದರೆ ನಾನು ಕ್ಲಾಸ್ ಲೀಡರ್ ಆಗಿದ್ದೆ ನಮ್ಮ ಗುರುಗಳು ಏನಾದ್ರೂ ವಿಶ್ರಾಂತಿ ತಗೋ ಬೇಕಾದಾಗ ' ಉಮಾ, ಸ್ವಲ್ಪ ಇಲ್ಲಿ ಬಾಮ್ಮಾ , ಒಂದು ಒಳ್ಳೆ ಕಥೆ ಹೇಳು ಮಕ್ಕಳನ್ನು ನಿಶ್ಯಬ್ದವಾಗಿ ಇರುವಂತೆ ಮಾಡ ಬೇಕಾದರೆ ನಿನ್ನ ಕಥೆಗಳೇ ರಾಮ ಬಾಣ. ಹಾಗಾಗಿ ನನಗೆ ಅದೊಂದು ಕಲೆ ಚಿಕ್ಕಂದಿನಲ್ಲೇ ಇತ್ತು. ದೇವರ ನಾಮ ಹಾಡುವುದು, ಚಲನ ಚಿತ್ರ ಗೀತೆಗಳನ್ನು ಹಾಡುವುದು ,ಕಥೆ ಹೇಳುವುದು, ಇವೆಲ್ಲ ಹವ್ಯಾಸ ನನಗೆ ಚಿಕ್ಕಂದಿನಲ್ಲಿ ಬಂದ ಬಳುವಳಿ. ಮತ್ತೆ ಎಲ್ಲದಕ್ಕೂ ಮೊದಲ ಬಹುಮಾನ ! 'ಆ ದಿನಗಳು' ಅದೆಂಥ ಸುಂದರ !!! ನನಗೆ ಮತ್ತೆ ಬಾಲ್ಯಕ್ಕೆ ಹೋಗ ಬೇಕೆನ್ನುವ ಆಸೆ. ಆದರೂ ಅಡ್ಡಿ ಇಲ್ಲ ಬಾಲ್ಯದ ನೆನಪುಗಳು ನನ್ನಲ್ಲಿ ಇನ್ನು ಹಸಿರಾಗಿದೆ. ಯಾವಾಗ ಬೇಕಿದ್ದರೂ ಕಲ್ಪನೆಯಲ್ಲಿ ಬಾಲ್ಯಕ್ಕೆ ತೆರಳಿ ಮತ್ತೆ ನನ್ನ ಈಗಿನ ಅವಸ್ತೆಗೆ ಮರಳುತ್ತೇನೆ. ಒಮ್ಮೆ 'ಭಗೀರಥ ಪ್ರಯತ್ನ' ನಾಟಕದಲ್ಲಿ ನಾನು ಗಂಗೆಯಾಗಿ ಅಭಿನಯಿಸಿದ್ದೆ. ಭಗೀರಥ ಗಂಗೆಯನ್ನು ಇಳಿದು ಬಾ ಗಂಗೆ, ಇಳಿದು ಬಾ ಭುವಿಗೆ ಎಂದು ಹಾಡಿ ಕರೆಯುತ್ತಿದ್ದ, ನಾನು ಸ್ವಲ್ಪ ಎತ್ತರದಿಂದ ಇಳಿದು ಬರುವಂತೆ ವೇದಿಕೆ ನಿರ್ಮಿತವಾಗಿತ್ತು. ಆಗೆಲ್ಲ ಶಾಲೆಯಲ್ಲಿ ಇದ್ದ ಬೆಂಚನ್ನೆ ಒಂದರ ಮೇಲೊಂದು ಮೆಟ್ಟಿಲಿನಂತೆ ಇಟ್ಟಿದ್ದರು, ನಾನು ಬಿಳಿ ಸೀರೆಯುಟ್ಟು, ಉದ್ದವಾದ ಹೆರಳು ಬಿಚ್ಚಿಕೊಂಡು ಬರುತ್ತಿರುವಾಗ ಬೆನ್ಚಿಂದ ಎಡವಿ ಬಿದ್ದೆ ಬಿಟ್ಟೆ !!! ಎಂತಹ ಅನಾಹುತ ಅಂತೀರಾ?? ಒಂದೆಡೆ ನನ್ನ ಉದ್ದವಾದ ಜಡೆ ಬೆಚಿಗೆ ಸಿಕ್ಕಿಹಾಕಿ ಕೊಂಡಿದೆ, ಇನ್ನೊಂದೆಡೆ ಸೀರೆಯ ಸೆರಗು ಸಿಕ್ಕಿ ಕೊಂಡಿದೆ. ಒಳ್ಳೇ ಫಜೀತಿ ಸ್ವಲ್ಪ ಸಮಯ ಪರದೆ ಇಳಿಸಿದರು ; ನಂತರ ನಾಟಕ ಏನೋ ಚೆನ್ನಾಗಿ ಮೂಡಿ ಬಂತು; ಆದರೆ ನನ್ನ ಜಡೆ ಬಿಡಿಸಲಾರದೆ ಸ್ವಲ್ಪ ಕಟ್ ಮಾಡಿದರು ನಮ್ಮಮಿಸ್ !! ಅದನ್ನು ನೆನಪಿಸಿಕೊಂಡರೆ ಈಗ ನನ್ನ ಮೊಗದಲ್ಲಿ ಮುಗುಳ್ನಗೆ ಮಿಂಚಿ ಮಾಯವಾಗುತ್ತದೆ. ಆಹಾ ಬಾಲ್ಯವೇ, ಇನ್ನೊಮ್ಮೆ ಬಾರಲಾರೆಯ ನನ್ನ ಬದುಕಲ್ಲಿ !
ಇನ್ನೊಂದು ಹಾಸ್ಯ ಪ್ರಸಂಗ ನೆನಪಿಗೆ ಬಂತು . ಆ ಘಟನೆಯಂತು ಬಿದ್ದು ಬಿದ್ದು ನಗುವ ಹಾಗೆ ಮಾಡುತ್ತದೆ .
ಒಮ್ಮೆ ಹೀಗೊಂದು ದಿನ ಲೈಬ್ರರಿ ಇಂದ ತಂದ 'ಸಣ್ಣ ಕಥೆಗಳ ಸಂಕಲನ' ಮನೆ ಇಂದ ಶಾಲೆಗೆ ಹೋಗುವ ದಾರಿಯಲ್ಲಿ ಓದುತ್ತ ನಡೆಯುತ್ತಿದ್ದೆ . ಪುಸ್ತಕದಲ್ಲಿ ಹುದುಗಿ ಹೋಗಿದ್ದ ನನಗೆ ಯಾವುದರ ಪರಿವೆ ಇಲ್ಲದೆ ಪುಸ್ತಕ ಹಿಂತಿರುಗಿಸುವ ದಿನವಾದದರಿಂದ ಓದಿ ಮುಗಿಸಲೇ ಬೇಕು ಎಂಬ ಛಲ ಇತ್ತು ಹಾಗಾಗಿ ಓದುತ್ತ ಸಾಗಿದ್ದೆ. ೨-೩ ಕಿ. ಮಿ. ದಾರಿ ಸವೆಯ ಬೇಕಿತ್ತು. ಓದುತ್ತ ಓದುತ್ತ ಒಂದು ತೆರೆದ ಒಳ ಚರಂಡಿಗೆ ದೊಪ್ಪನೆ ಬಿದ್ದೆ ನೋಡಿ ; ಒಳ್ಳೆ ಪ್ರಪಾತಕ್ಕೆ ಬಿದ್ದ ಅನುಭವ!! ನಾನು ''ಅಪ್ಪ ದೇವರೆ ಈ ಕಂದಕದಿಂದ ಹೊರ ಬರುವಂತೆ ಮಾಡು ನಿನಗೆ ೧೦೧ ನಮಸ್ಕಾರ ಹಾಕುತ್ತೆನೆ. ಜೊತೆಗೆ ಹೆಜ್ಜೆ ನಮಸ್ಕಾರ, ೧ ೦ ೧ ಬಾರಿ ' ಓಂ ಶ್ರೀ ಗಣೇಶಾಯ ನಮಃ ' ಎಂದು ಭಕ್ತಿ ಇಂದ ಬರೆಯುತ್ತೇನೆ ಎಂದು ಹರಸಿಕೊಂಡೆ. ಯಾರಾದ್ರು ಕಾಪಾಡಿ ಎಂದು ಅರಚಿ ಅರಚಿ ಗಂಟಲ್ಲೆಲ್ಲ ಒಣಗಿ ಹೋಗಿ ನೀರು ಕುಡಿಯಬೇಕೆನಿಸಿತು. ಸುಮಾರು ತಾಸುಗಳೇ ಕಳೆದು ಹೋದವು . ಕೊನೆಗೆ ಒಬ್ಬರು ವಯಸ್ಸಾದ ತಾತ ಒಂದು ಹಗ್ಗವನ್ನು ಇಳಿ ಬಿಟ್ಟು ಅದನ್ನು ಗಟ್ಟಿಯಾಗಿ ಹಿಡಿದು ಕೊಳ್ಳುವಂತೆ ಹೇಳಿದರು. ಅವರ ಆ ಸಹಾಯ ನಾನು ಈಗಲೂ ಸ್ಮರಿಸುತ್ತೇನೆ. ಕೊನೆಗೆ ಮೇಲೆ ಬಂದ ಮೇಲೆ ಯುನಿಫಾರ್ಮ್ ಎಲ್ಲ ಕೊಳೆಯಾಗಿತ್ತು . ಇನ್ನು ಶಾಲೆಗೆ ಹೋಗುವುದರಲ್ಲಿ ಅರ್ಥ ಇಲ್ಲ ಎಂದು ಮನೆಗೆ ಓಡಿದೆ. ಮನೆಗೆ ಹೋಗಿ ಅಮ್ಮನಿಗೆ ನಡೆದ ವಿಚಾರ ಎಲ್ಲ ವಿವರಿಸಿದೆ. ಅಮ್ಮ ಬಿಸಿ ಬಿಸಿ ನೀರು ಹಂಡೆ ಇಂದ ಮೊಗೆದು ಮೊಗೆದೂ ಸುರಿದರು. ಮನಸ್ಸು ದೇಹ ಎಲ್ಲ ಹಾಯೆನಿಸಿತು. ಮತ್ತೆಂದೂ ನಾನು ದಾರಿಯಲ್ಲಿ ಪುಸ್ತಕ ಓದುವ ಸಾಹಸ ಮಾಡಲಿಲ್ಲ!!!!!!!
No comments:
Post a Comment