ನನ್ನ ನೆನಪಿನಂಗಳದಿಂದ ೪
ಕಾಲೇಜ್ ಡೇಸ್ ಇಂದ ಬರೆಯಲು ಆರಂಭಿಸಿದೆ . ಅದು ಹೇಗೆ ಅಂದರೆ ಮೊದಲ ವರ್ಷದ ವಾಣಿಜ್ಯ ಪದವಿಯಲ್ಲಿ ಕಾಲೇಜ್ ಮ್ಯಾಗಜಿನ್ ಗೆ ಯಾರಾದ್ರು ಕಥೆ ಕವನ ಬರೆಯುವವರು ಬರೆದು ತಂದು ಕೊಡಿ ಎಂದು ಒಂದು ಮೆಮೊ ಬಂತು. ಸರಿ ಆ ದಿನವೇ ನಾನು ನಮ್ಮ ತಂದೆಯೊಂದಿಗೆ ಅಪ್ಪ ನಂಗೆ ಏನಾದ್ರೂ ಬರಿ ಬೇಕು ಅನ್ನಿಸ್ತ ಇದೆ ನಿನ್ನ ಸಹಾಯ ಬೇಕು ಅಂದೆ . ಅಪ್ಪ ತುಂಬಾ ಸಾಹಿತ್ಯಾಸಕ್ತರು ಅದರಲ್ಲೂ ಅ. ನ.ಕ್ರು. ಕು.ವೆಮ್.ಪು. ಕು. ರಾ. ಸು. ಎಸ್. ಎಲ್. ಭೈರಪ್ಪ ಅವರ ಪುಸ್ತಕ ಗಳನ್ನು ಕೊಂಡು ತಂದು ಓದುತ್ತಿದ್ದರು . ನಂತರದ ದಿನಗಳಲ್ಲಿ ಪಿ. ಲಂಕೇಶ್ ಅವರ ಕಟ್ಟಾ ಅಭಿಮಾನಿ ಗಳಾದರು . ಅದಾದ ನಂತರದ ದಿನಗಳಲ್ಲಿ ರವಿ ಬೆಳಗೆರೆ ಅವರ ಅಭಿಮಾನಿ ಕೂಡ. ಮತ್ತೆ ವಿಷಯಕ್ಕೆ ಬರುತ್ತೇನೆ . ಅದಕ್ಕೆ ಅಪ್ಪ ''ಏನಾದ್ರೂ ಬರೀ ಮಗಳೇ ಆದ್ರೆ ನಿನ್ನ ಸ್ವಂತದ್ದು ಆಗಿರ ಬೇಕು , ನಾನು ಕೊನೆಯಲ್ಲಿ ಏನಾದ್ರೂ ತಪ್ಪುಗಳಿದ್ರೆ ಅದನ್ನು ಸರಿ ಪಡಿಸಿ ಕೊಡುತ್ತೇನೆ, ನಂತರ ಅದನ್ನು ನಿನ್ನ ಕನ್ನಡದ ಅಧ್ಯಾಪಕರಿಗೆ ತೋರಿಸಿ ಅವರು ಸರಿ ಇದೆ ಅಂದರೆ ಮಾತ್ರ ಮ್ಯಾಗಜಿನ್ ಗೆ ಕಳಿಸು'' ಅಂದರು. ಅಷ್ಟೇ ಅಲ್ಲದೆ ''ಬರೆಯೋದು ಸಹ್ಹ ಒಂದು ಕಲೆ ಮಗಳೇ '' ಅಂತ ನಮ್ತಂದೆ ನಂಗೆ ಯಾವಾಗಲೂ ಹೇಳ್ತಿದ್ದರು. ನನ್ನ ಚೂರು ಪಾರು ಬರವಣಿಗೆಗೆ ನಮ್ತಂದೆ ನನ್ ಬಗ್ಗೆ ತೋರಿಸ್ತಿದ್ದ ಪ್ರೀತಿ, ಮುತುವರ್ಜಿ, ಕಾಳಜಿ, ಅವರು ಹುರಿದುಂಬಿಸುತ್ತಿದ್ದ ಪರಿ ನಾನು ಬರೆಯುವಾಗಲ್ಲೆಲ್ಲ ಅವರು ನನ್ನೊಂದಿಗೆ ಇದ್ದಾರೆ ಎಂಬ ನನ್ನ ಒಳ ಮನಸ್ಸಿನ ಆ ಚಿಂತನೆ ತುಂಬಿದ್ದೆ ನನ್ನ ಪೂಜ್ಯ ತಂದೆಯವರು . ಯಾಕೆಂದರೆ ಈಗ ನನ್ನ ತಂದೆ ನಮ್ಮೊo ದಿಗಿಲ್ಲ ಆದರೂ ಅವರ ಆ ನೆನಪು ನನ್ನ ಬರವಣಿಗೆಗೆ ಈಗಲೂ ತುಂಬಾ ಸಹಾಯಕವಾಗ್ತಾ ಇದೆ. ನನ್ನನ್ನು ತಿದ್ದಿ ತೀಡಿ ಒಳ್ಳೆ ಸಂಸ್ಕಾರ , ಗುರು ಹಿರಿಯರಲ್ಲಿ ಗೌರವ , ಪ್ರಕೃತಿಯನ್ನು ಪ್ರೀತಿಸುವುದರ ಜೊತೆ ಜೊತೆಗೆ ಪ್ರಾಣಿ-ಪಕ್ಷಿ ಸಂಕುಲ , ಅದಷ್ಟೇ ಯಾಕೆ ಈ ಇಡಿ ಪ್ರಪಂಚವನ್ನೇ ಪ್ರೀತಿಸುವುದನ್ನು ಹೇಳಿ ಕೊಟ್ಟ ನನ್ನ ಗುರುಗಳು ನಮ್ಮ ತಂದೆಯವರು. ಅವರ ಬಗ್ಗೆ ಎಷ್ಟು ಹೇಳಿದರೂ ಕಮ್ಮಿ ಅನ್ನಿಸುತ್ತೆ. ಈ ಲೇಖನವನ್ನು ಬರೆಯಲು ಅವರ ನೆನಪುಗಳೇ ಕಾರಣ. ನಾನು ಕಾಲೇಜ್ ಮ್ಯಾಗಜಿನ್ ಗಳಿಗೆ ಸಣ್ಣ ಕತೆ, ಕವನ ಬರೆಯಲು ಮೂಲ ಕಾರಣ ನನ್ನ ಪ್ರೀತಿಯ ತಂದೆಯವರು . ನನ್ನ ಪ್ರತಿ ಕತೆ, ಕವನ, ಅವರಿಗೆ ಮೊದಲು ತೋರಿಸಿ ಅವರಿಂದ ತಪ್ಪು - ಒಪ್ಪು ತಿದ್ದಿಸಿ, ಏನಾದ್ರು ಹೊಸ ಪದ ಪುಂಜಗಳು ಬೇಕಿದ್ದ ಪಕ್ಷದಲ್ಲಿ ಅಪ್ಪಾನೆ ನನ್ನ ನಿಘಂಟು; ಅವರಿಂದ ಕೆಲವೊಂದು ಪದಗಳನ್ನು ಸೇರಿಸಿ, ಅದನ್ನು ಮತ್ತೂ ಬೇಕೆಂದರೆ ಮುಂದುವರಿಸಿ ಅದಕ್ಕೆ ಏನಾದ್ರೂ ಮಾಹಿತಿ ಬೇಕಿದ್ರೆ ಲೈಬ್ರರಿಗೆ ಅಪ್ಪನ ಜೊತೆ ಹೋಗಿ ತುಂಬಾ ಕಾದಂಬರಿಗಳನ್ನು ಓಡುತ್ತಿದೆ; ನನ್ನ ಮೊಟ್ಟ ಮೊದಲ ಸ್ವಂತ ಕವನ ಹೀಗಿತ್ತು ನೋಡಿ
ಸಿಡಿದು ನಿಂತಿಹೆ ನಾನು
ಸರ್ಕಾರದ ಕಾನೂನಿನ ರೀತಿಯ ಕಂಡು
ಅದರೆನೂ ಮಾಡೆನು ನಾನೆನನ್ನು ಇಂದು
ಬಡವರನು ತುಳಿದು ನಿಂತಿಹ ಓ ನಿರ್ಧಯಿ ಸರ್ಕಾರವೇ
ನಲುಗಿಹರು ಅವರು ನಿನ್ನ ಅಲುಗಿನ ಇರಿತಕ್ಕೆ
ಏರಿಸಿರುವೆ ಬೆಲೆಗಳನು ಎವೆರೆಸ್ಟ್ ಶಿಖರದಂತೆ
ಹತ್ತಲಾರರು ಬಡವರು ತೆನಸಿಂಗನಂತೆ
ಇದ ಕಂಡು ನಾನು ಸಿಡಿದು ನಿಂತರೆ
ಈ ಬಡಪಾಯಿಗೆ ಬೆಂಬಲ ಸಿಗುವುದೇ?
ಅಪ್ಪ ಎಷ್ಟು ಖುಷಿ ಪಟ್ಟರು ಅಂದರೆ ಭೇಷ್ ಮಗಳೇ ಇದು ಸರ್ವ ಕಾಲಕ್ಕೂ ಅನ್ವಯ ಅಗುತ್ತೆ. ತುಂಬಾ ಸೊಗಸಾಗಿದೆ. ''ಏರಿಸಿರುವೆ ಬೆಲೆಗಳನು ಎವೆರೆಸ್ಟ್ ಶಿಖರದಂತೆ; ಹತ್ತಲಾರರು ಬಡವರು ತೆನಸಿಂಗನಂತೆ ಹತ್ತಲಾರರು ಬಡವರು ತೆನಸಿಂಗನಂತೆ'' ವಾಹ್ ಎಂಥ ಅದ್ಭುತವಾದ ಸಾಲುಗಳು ಎಂದು ತುಂಬಾ ಇಷ್ಟ ಪಟ್ಟು ಅಕ್ಕ ಪಕ್ಕದ ಮನೆಯವರಿಗೆ ಕೂಡ ಓದಿ ಹೇಳಿ ನನ್ನ ಮಗಳು ಬರೆದದ್ದು ಎಂದು ಸಂಭ್ರಮಿಸಿದ್ದರು. ಕಾಲೇಜ್ ಮ್ಯಾಗಜಿನ್ ಕಾಪಿ ಬಂದಾಗ ನಮ್ಮ ಮನೆಯಲ್ಲಿ ಎಲ್ಲರೂ ಓದಿ ಖುಷಿ ಪಟ್ಟರು ಮರೆಯಲಾಗದ ಕ್ಷಣಗಳು ನನ್ನ ಬಾಳಿನಲ್ಲಿ,. ಇದಾದ ನಂತರ ಕೂಡ ಅಪ್ಪಾನೆ ಒಳ್ಳೊಳ್ಳೆ ಪುಸ್ತಕ ಹುಡುಕಿ ತಂದು ಕೊಡುತ್ತಿದ್ದರು. ನನಗೆ ಈಗಲೂ ನೆನಪಿದೆ, ತಂದೆಯವರು ಕೊಡುತ್ತಿದ್ದ ಪುಸ್ತಕ ತ್ರಿವೇಣಿ, ಆರ್ಯಾಂಭ ಪಟ್ಟಾಭಿ ಅವರದು. ಅವರಿಬ್ಬರೂ ಅಕ್ಕ-ತಂಗಿ ಎಂದು ನನ್ನಮ್ಮ ನಿಂದ ನನಗೆ ತಿಳಿಯಿತು. ಅಮ್ಮ ತ್ರಿವೇಣಿ ಹಾಗು ಆರ್ಯಾಂಭ ಪಟ್ಟಾಭಿ ಅವರ ಕಟ್ಟಾ ಆಭಿಮಾನಿ. ಅವರ ಬುಕ್ಸ್ ಹುಡುಕಿ ಹುಡುಕಿ ತಂದು ಅಮ್ಮನಿಗೆ ಕೊಟ್ಟು ನಾನು ಸಹಾ ಓದುತ್ತಿದ್ದೆ. ತ್ರಿವೇಣಿಯವರು ಬರೆದ ಮೊದಲ ಕಾದಂಬರಿ 'ಬೆಕ್ಕಿನ ಕಣ್ಣು' ಹಾಗೂ ನಾನು ಅತ್ಯಂತ ಆಸಕ್ತಿ ಇಂದ ಓದಿದ ಮೊದಲ ಕಾದಂಬರಿ 'ಬೆಕ್ಕಿನ ಕಣ್ಣು' ತುಂಬಾ ಸೊಗಸಾಗಿ ಓದಿಸಿಕೊಂಡು ಹೋದ ಮೊದಲ ಕಾದಂಬರಿ. ಮೊದಲ ಪುಟದಿಂದ ಕೊನೆಯವರೆಗೂ ತಲೆ ಎತ್ತದೆ ಸಂಪೂರ್ಣ ಓದಿ ಮುಗಿಸಿದೆ. ನನ್ನ ಬಾಲ್ಯದಲ್ಲಿ ನಾನ್ಯಾವತ್ತೂ ಮಾರ್ಕೆಟಿಗಾಗಲೀ ಶಾಪಿಂಗ್ ಗಾಗಲೀ ಹೋಗುವುದು ವಾಡಿಕೆ ಇರಲಿಲ್ಲ ಶಾಲೆ, ಕಾಲೇಜ್, ತಪ್ಪಿದರೆ ಸಿಟಿ ಸೆಂಟ್ರಲ್ ಲೈಬ್ರರಿ . ನನಗಿನ್ನೂ ಚೆನ್ನಾಗಿ ಜ್ಞಾಪಕ ಇದೆ ; ಶಾಲೆಗೆ ಬೇಸಿಗೆ ರಜ ಬಂದರೆ ಸಾಕು, ಮನೆಗೆ ಕನ್ನಡ ಪ್ರಭ, ಸುಧಾ, ಪ್ರಜಾಮತ, ಚಂದಮಾಮ , ಗೊಂಬೆ ಮನೆ, ಮಯೂರ, ತುಷಾರ, ಇನ್ನು ಮುಂತಾದ ದೈಹಿಕ, ಸಾಪ್ತಾಹಿಕ, ಮಾಸಿಕ, ಎಲ್ಲವೂ ಮನೆ ಬಾಗಿಲಿಗೆ ಬರುತ್ತಿದ್ದವು. ಅಮ್ಮ, ಅಪ್ಪ, ಅಕ್ಕಂದಿರು, ಅಣ್ಣಂದಿರು, ಎಲ್ಲರು ಓದುವ ಗೀಳಿದ್ದವರೇ . ಎಲ್ಲರೂ ನಾ ಮುಂಚೆ, ತಾ ಮುಂಚೆ, ಎಂದು ಕಿತ್ತಾದುತ್ತಿದ್ದೆವು ಮತ್ತು ಆ ಗಲಾಟೆಗೆ ನಮ್ಮಮ್ಮ ಬಂದು ಹೀಗೆ ಹೇಳುತ್ತಿದ್ದರು ' ಅಯ್ಯೋ ಮಕ್ಕಳಾ ಯಾಕ್ಹೀಗೆ ಕಿತ್ತಾಡು ತೀರಾ ? ಮನೇಲೆ ಇರುತ್ತಲ್ಲ ನಿಧಾನ ವಾಗಿ ಓದಿ' ಎಂದರೂ ನಾವುಗಳು ಕಿವಿ ಮೇಲೆ ಹಾಕಿ ಕೊಳ್ಳುತ್ತಿರಲಿಲ್ಲ , ಎಲ್ಲ ಓದಿ ಮುಗಿಸಿ ಮತ್ತೆ ಮನೆ ಸಮೀಪ ಲೈಬ್ರರಿ ಗೆ ಹೋಗಿ ತುಂಬಾ ಬುಕ್ಸ್ ಓ ದುತ್ತಿದ್ದೆವು. ನಾನು ಶಾಲಾ ದಿನಗಳಲ್ಲಿ ಮೊದಲು ಓದಿದ ಒಂದು ಸಣ್ಣ ಕಥೆ 'ರಾ ಜು ಮತ್ತು ಹುರುಳಿ ಬೀಜ' ಅದೆಂತಹ ಕಲ್ಪನೆ ಎಂದರೆ ನನ್ನ ಮನಸ್ಸಿನಲ್ಲಿ ಅಚ್ಚು ಒತ್ತಿದ ಮೊದಲ ಕಥೆ. ಅದನ್ನು ನನ್ನ ಮಕ್ಕಳಿಗೆ ಹೇಳಿ ಖುಷಿ ಪಡು ತ್ತಿದ್ದೆ. ನನ್ನ ಮಕ್ಕಳು ಆಶ್ಚರ್ಯ ಚಕಿತರಾಗಿ ಬಿಟ್ಟ ಕಣ್ಣು ಬಿಟ್ಟಂತೆ ಕೇಳಿ ಖುಷಿ ಪಟ್ಟಿದ್ದು ಉಂಟು . ಇದೆಲ್ಲದರ ಪ್ರೇರೇಪಣೆ ನನಗೆ ಬರೆಯುವ ಹವ್ಯಾಸ ಮೂಡಿ ಬರಲು ಕಾರಣ ವಾಯಿತು. ಇನ್ನು ಬರೆಯುತ್ತ ಹೋದರೆ ನನ್ನ ಬಾಲ್ಯ , ನನ್ನ ಶಾಲಾ ದಿನಗಳು, ಎಲ್ಲ ನನ್ನ ಮನಸ್ಸಿನ ತೆರೆ ಮೇಲೆ ಮೂಡಿ ಬರುತ್ತೆ. ಅದನ್ನು ಮುಂದಿನ ದಿನಗಳಲ್ಲಿ ನಿರೀಕ್ಷಿಸಿ. ಮತ್ತೆ ಮುಂದುವರಿಸುತ್ತೇನೆ.
No comments:
Post a Comment