Friday, October 7, 2016

Uma Prakash: ' ಸಾವು'
ಇಂದೇಕೋ ನನ್ನನ್ನು ಸಾವು ತುಂಬಾ ಕಾಡುತ್ತಿದೆ ಅನ್ನಿಸಿತು.  ಸಾವಿನ ಬಗ್ಗೆ ಬಹಳ ತೀವ್ರವಾಗಿ ಆಲೋಚಿಸಿದೆ! ಈ 'ಸಾವು' ಅಂದರೆ ಏನು? ಯಾತಕ್ಕಾಗಿ ಹುಟ್ಟಿರುವ ಪ್ರತಿ ಜೀವಿಯೂ ಸಾಯಲೇ ಬೇಕು ?  ಜೀವ ಇರುವ ಮಾನವ ಸಂಕುಲ, ಪಕ್ಷಿ ಸಂಕುಲ, ಪ್ರಾಣಿಗಳು, ಅದಷ್ಟೇ ಅಲ್ಲದೆ ಗಿಡ-ಮರಗಳು ಕೂಡ ಇಂತಿಷ್ಟೇ ವರುಷ ಎಂದು ಜೀವಿಸುತ್ತದೆ !!!! ಸಾವು ಪ್ರತಿಯೊಬ್ಬರನ್ನು ಒಂದಲ್ಲ ಒಂದು ರೀತಿ ಬಲಿ ತೆಗೆದುಕೊಂಡೆ ತೀರುತ್ತದೆ.  ಅದು ಸ್ವಾಭಾವಿಕ ಸಾವೇ ಆಗಬೇಕೆಂದಿಲ್ಲ; ಸಾವಿನಲ್ಲೂ ತುಂಬಾ ಪ್ರಾಕಾರಗಳಿವೆ.   ಆಕಸ್ಮಿಕ ಸಾವು ಅಂದರೆ ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಳ್ಳುವವರು, ವಾಹನಗಳಿಗೆ ಸಿಲುಕಿ ಮರಣ ಹೊಂದುವವರು, ವಾಹನಗಳಲ್ಲಿ ಪ್ರಯಾಣಿಸುವಾಗ ಸಾವನಪ್ಪುವವರು, ನದಿಯಲ್ಲಿ ಸ್ನಾನ ಮಾಡುವಾಗ ಸಾವನಪ್ಪುವವರು, ಬೆಂಕಿ ದುರಂತದಲ್ಲಿ ಸಾವನಪ್ಪುವವರು ಹೀಗೆ ಹಲವಾರು ಪ್ರಾಕಾರಗಳು.  ನನಗೆ ಸಾವು ಯಾವ ರೀತಿ ಬರಬಹುದು ಎಂದು ಬಹಳ ಯೋಚನೆ ಆಗಿದೆ? ಸ್ವಾಭಾವಿಕವಾಗಿ ನನ್ನ ಆಯಸ್ಸು ಮುಗಿದ ನಂತರ ಸತ್ತರೆ ಅಡ್ಡಿ ಇಲ್ಲ, ಬೇರೆ ಯಾವುದೇ ಅನಾಹುತಗಳಲ್ಲಿ ಸಾಯಬಾರದು ಎಂದು ನನ್ನ ಇಚ್ಛೆ.  ಕೆಲವೊಮ್ಮೆ ನನಗೆ ಅನ್ನಿಸುವುದು ನಾನ್ಯಾಕೆ ಸಾವಿಗೆ ಶರಣಾಗದೆ ಚಿರಂಜೀವಿ ಯಾಗಿರಬಾರದು ? ದೇವರನ್ನು ಬೇಡಿಕೊಂಡು ಪ್ರಾಣ ಭಿಕ್ಷೆ ಯಾಚಿಸಿದರೆ ಅವನು ಬಿಲ್ ಕುಲ್ ಒಪ್ಪುವುದಿಲ್ಲ, ಸಾವು ವಿಧಿ ನಿಯಾಮಕ !  ಆದರೆ ಸಾವಿತ್ರಿ ತನ್ನ ಗಂಡನ ಜೀವ ಕೊಂಡೊಯ್ಯ ಬೇಡ ಎಂದು ಯಮ ರಾಜನನ್ನು ಬೇಡಿ ಕೊಂಡಂತೆ ನಾನು ಪರಿ ಪರಿಯಾಗಿ ಯಮ ಧರ್ಮ ರಾಜನನ್ನು ಬೇಡಿಕೊಂಡರೆ ಅವನಿಗೆ ನನ್ನ ಮೇಲೆ ಕರುಣೆ ಹುತ್ತ ಬಹುದೇ ? ಛೆ ಛೆ ಇದೆಂಥ ಆಲೋಚನೆ ಬಂದಿತು ನನಗೆ ?  ಹುಟ್ಟು ಸಾವಿನ ಮಧ್ಯೆ ಇರುವ ಈ 'ಜೀವನ' ಕೆಲವರಿಗೆ ಅಲ್ಪಾವಧಿ, ಕೆಲವರಿಗೆ ಧೀರ್ಘಾವಧಿ ಅಲ್ಲವೇ ? ಅಂದ ಹಾಗೆ ನನಗೆ ಅಲ್ಪಾಯು ಎಂದಾಗ ಥಟ್ಟನೆ ನನ್ನ ಮನಸ್ಸಿಗೆ ಬರುವುದು 'ಭಕ್ತ ಮಾರ್ಕಂಡೇಯ'  ಹಾಗೂ 'ಭಕ್ತ ಧ್ರುವ'  ಇವರೀರ್ವರು ಅತಿ ಪುಟ್ಟ ವಯಸಿನಲ್ಲಿ ಯಮಧರ್ಮರಾಯನ  ಪಾಶಕ್ಕೆ ಆಹುತಿ ಯಾಗುತ್ತಾರೆ.   'ಧೀರ್ಘಾಯುಷಿ' ಎಂದಾಗ ನನ್ನ ಮನಸ್ಸಿಗೆ ಬಂದು ಹೋಗುವವರು ಶತಾಯು ಡಾ : ವಿಶ್ವೇಶ್ವರಯ್ಯ.  ನಾನು ಅತ್ತ ಕಡೆ 'ಅಲ್ಪಾಯು' ಆಗಲಾರೆ ಇತ್ತ ಕಡೆ 'ಧೀರ್ಘಾಯು' ಕೂಡ ಆಗಲಾರೆ 'ಅರ್ಧ ಶತಕ ' ಬಾರಿಸುತ್ತಿದಂತೆ ದೇವರು  ನನ್ನ
ಪ್ರಾಣ ಪಕ್ಷಿ ಯನ್ನು ನನ್ನ ಶರೀರ ದಿಂದ ಬೇರೆ ಮಾಡಿ ನನ್ನನ್ನು ಕರೆದೊಯ್ಯಲಿ ಎಂದು ಬೇಡಿಕೊಂಡು ನನ್ನ ಈ ಪುಟ್ಟ ಲೇಖನವನ್ನು ಮುಗಿಸುತ್ತೇನೆ. ಚಿಂತ್ಯಾಕೆ ಮಾಡುತಿ ಚಿನ್ಮಯ ನಿದ್ದಾನೆ ಅಲ್ಲವೇ ಎಂದು ನನ್ನ ಮನವೇ ಸಾಂತ್ವನ ಹೇಳುತಿದೆ ನೋಡಿ !!!!!!

Sunday, September 25, 2016

" ಮಹಾ ಗಣೇಶ - ತರ್ಪಣ - ಒಂದು ಚಿಂತನೆ "

ಉಪನೀತನಾದ ಪ್ರತಿಯೊಬ್ಬ ಬ್ರಾಹ್ಮಣನೂ ದೇವ - ಋಷಿ - ಆಚಾರ್ಯ ಮತ್ತು ಪಿತೃ ತರ್ಪಣಗಳನ್ನು ಕೊಡಬೇಕು. ತರ್ಪಣ " ಎರಡು ವಿಧ ".

೧. ಜಲ ತರ್ಪಣ
೨. ತಿಲ ತರ್ಪಣ

ಜಲ ತರ್ಪಣವನ್ನು ಪ್ರತಿನಿತ್ಯ " ಬ್ರಹ್ಮಯಜ್ಞ " ದಲ್ಲಿ ಕೊಡಬೇಕು.

ದರ್ಶ ( ಅಮಾವಾಸ್ಯೆ ) ಪರ್ವಕಾಲ, ಸೂರ್ಯ - ಚಂದ್ರ ಗ್ರಹಣ, ಉತ್ತರ - ದಕ್ಷಿಣಾಯನ - ಮಾತಾ ಪಿತೃಗಳ ಶ್ರಾದ್ಧಗಳಲ್ಲಿ - ಮಹಾಲಯ ಇತ್ಯಾದಿ " ಷಣ್ಣವತಿ " ಅಂದರೆ ೯೬ ಪರ್ವ ಕಾಲಗಳಲ್ಲಿ ಪಿತೃಗಳಿಗೆ " ತಿಲ ತರ್ಪಣ " ಗಳನ್ನು ಕೊಡಬೇಕು. ಹೀಗೆ ತರ್ಪಣ ಕೊಡುವುದರಿಂದ ದೇವ - ಋಷಿ - ಗುರು - ಪಿತೃಗಳು ಸಂತೃಪ್ತರಾಗಿ ಆಶೀರ್ವದಿಸುವರು. ಅದರಿಂದ ಸಮಸ್ತ ಮಂಗಲವಾಗುವುದು!

ಪುಣ್ಯಕ್ಷೇತ್ರ, ಪುಣ್ಯನದಿ, ಸಮುದ್ರ ಅಥವಾ ತೀರ್ಥಗಳಲ್ಲಿ ಸ್ನಾನ ಮಾಡಿದ ನಂತರ ತರ್ಪಣವನ್ನು ಕೊಡಬೇಕು.

ತಿಲ ತರ್ಪಣ ( ಎಳ್ಳು - ನೀರು ಸಮೇತ ) ಕೊಡದ ಸಾಧ್ಯವಿಲ್ಲದ ಪಕ್ಷದಲ್ಲಿ ಜಲ ತರ್ಪಣವನ್ನಾದರೂ ( ಬರೀ ನೀರಿನಿಂದ ) ಕೊಡಲೇಬೇಕು.

ಮೂರು ದರ್ಭೆಗಳಿಂದ ಮಾಡಿದ ಪವಿತ್ರವನ್ನು ಬಲಗೈ ಅನಾಮಿಕ ಬೆರಳಿಗೆ ( ಕಿರು ಬೆರಳಿನ ಪಕ್ಕದ ಬೆರಳು - ಉಂಗರದ ಬೆರಳು ) ತರ್ಪಣ ಕೊಡುವ ಕಾಲದಲ್ಲಿ ಹಾಕಿಕೊಳ್ಳಬೇಕು. ಅದು ಸಾಧ್ಯವಿಲ್ಲದ ಪಕ್ಷದಲ್ಲಿ ಅಂದರೆ ದರ್ಭೆ ದೊರೆಯದೇ ಇದ್ದಾಗ ಚಿನ್ನದ ಅಥವಾ ಬೆಳ್ಳಿಯ ಪವಿತ್ರದ ಉಂಗುರವನ್ನು ಧರಿಸಿಕೊಂಡು ಅಂಗೈಯಲ್ಲಿ ತುಳಸೀದಳವನ್ನಿಟ್ಟುಕೊಂಡು ತರ್ಪಣವನ್ನು ಕೊಡಬೇಕು.

" ತರ್ಪಣದಲ್ಲಿ ದರ್ಭೆಯ ಪವಿತ್ರ "

ದರ್ಭೆಯಿಂದ ಮಾಡಿದ ಪವಿತ್ರವನ್ನು ಧರಿಸುವುದೇ ಸರಿಯಾದ ಕ್ರಮ. ಉಳಿದಿದ್ದು ಅಪಧರ್ಮ. ಹಾಗೆಂದು ದರ್ಭೆಯಿಂದ ಮಾಡಿದ ಪವಿತ್ರ ಇರುವಾಗ ಅದನ್ನು ಬಿಟ್ಟು ಬೇರೇ ಪ್ರಯತ್ನ ಮಾಡುವುದು ಸೂಕ್ತವಲ್ಲ.

ದರ್ಭೆಯ ಪವಿತ್ರ ಇಲ್ಲದ ಪಕ್ಷದಲ್ಲಿ ಮೂರು ದರ್ಭೆಗಳನ್ನು ಅನಾಮಿಕಾ ಬೆರಳಿಗೆ ಸುತ್ತಿಕೊಂಡು ತರ್ಪಣ ಕೊಡುವ ಸಂಪ್ರದಾಯವೂ ಉಂಟು.

ದರ್ಭೆಯು ಸಿಕ್ಕದಿದ್ದರೆ ಬೆರಳುಗಳ ಮಧ್ಯದಲ್ಲಿ " ತುಳಸೀದಳ " ವನ್ನು ಸಿಕ್ಕಿಸಿ ಕೊಂದಾದರೂ ತರ್ಪಣವನ್ನು ಕೊಡಬಹುದು.

ತರ್ಪಣಕ್ಕಾಗಿ ಪ್ರತ್ಯೇಕ ಕಲಶೋದಕಕವನ್ನು ಉಪಯೋಗಿಸಬೇಕು. ಅಂದರೆ ಆಚಮನಕ್ಕೆ ಪ್ರತ್ಯೇಕ ನೀರು ಇಟ್ಟುಕೊಳ್ಳಬೇಕು. ತರ್ಪಣದ ಕಲಶಕ್ಕೆ ಸಾಲಗ್ರಾಮ ನಿರ್ಮಾಲ್ಯ ತೀರ್ಥವನ್ನು ಸೇರಿಸಬೇಕು.

" ತರ್ಪಣ ವಿಧಾನ "

ಮಾತಾ ಪಿತೃಗಳ ಶ್ರಾದ್ಧಾಂಗವಾಗಿ " ಪರೇಹನಿ " ಅಂದರೆ ಮಾರನೇ ದಿನ ಕೊಡಬೇಕಾದ ತಿಲ ತರ್ಪಣದಲ್ಲಿ ಮೂರು ಜನಕ್ಕೆ ಮಾತ್ರ ತರ್ಪಣ ಕೊಡಬೇಕು.

" ಮಾತೃ ಶ್ರಾದ್ಧ " ದಲ್ಲಿ....

ಮಾತೃ ( ತಾಯಿ )
ಪಿತಾಮಹಿ ( ತಂದೆಯ ತಾಯಿ )
ಪ್ರಪಿತಾಮಹಿ ( ತಂದೆಯ ತಂದೆಯ ತಾಯಿ )

ಇವರಿಗೆ ಮಾತ್ರ ತರ್ಪಣ ಕೊಡಬೇಕು.

ಇದೇ ರೀತಿ ಪಿತೃ ಶ್ರಾದ್ಧಾಂಗ ತರ್ಪಣವನ್ನು...

ಪಿತೃ ( ತಂದೆ )
ಪಿತಾಮಹ ( ತಂದೆಯ ತಂದೆ )
ಪ್ರಪಿತಾಮಹ ( ತಂದೆಯ ತಂದೆಯ ತಂದೆ )

೧. ತರ್ಪಣ ಕೊಡುವಾಗ ಋಗ್ವೇದಿಗಳು ಮೊದಲು ಹೆಸರು ಹೇಳಿ ನಂತರ ಗೋತ್ರವನ್ನು ಹೇಳಬೇಕು.

೨. ಯಜುರ್ವೇದಿಗಳು ಮೊದಲು ಗೋತ್ರವನ್ನೂ ನಂತರ ಹೆಸರನ್ನೂ ಹೇಳಬೇಕು.

೩. ತರ್ಪಣಕ್ಕೆ ಬಾಧ್ಯಸ್ತರಾಗಿದ್ದು ಗತಿಸಿದವರ ಗೊತ್ತಿಲ್ಲದ ಪಕ್ಷದಲ್ಲಿ " ಯಜ್ಞಪ್ಪ " ಎಂದು ಗಂಡಸರಿಗೂ; " ಯಜ್ಞಮ್ಮ " ಎಂದು ಹೆಂಗಸರಿಗೂ ಹೇಳಬೇಕು.

೪. ಗೋತ್ರ ಗೊತ್ತಿಲ್ಲದ ಪಕ್ಷದಲ್ಲಿ " ಕಾಶ್ಯಪ " ಗೋತ್ರ ಎಂದು ಹೇಳಬೇಕು.

೫. ಪಿತೃಗಳಿಗೆ ತರ್ಪಣವನ್ನು ಬಲ ಅಂಗೈಯಲ್ಲಿ ತಿಲವನ್ನಿಟ್ಟುಕೊಂಡು ಕಲಶದ ನೀರನ್ನು ಹಾಕಿಕೊಂಡು ಬಲಗೈ ಅಂಗುಷ್ಠದ ( ಹೆಬ್ಬಟ್ಟಿನ ) ಮತ್ತು ತೋರು ಬೆರಳಿನ ಬುಡಗಳ ಮಧ್ಯದಿಂದ ಮೂಸಲಾ ತಾಮ್ರದ ಪಾತ್ರೆಯಲ್ಲಿ ಕೊಡತಕ್ಕದ್ದು.

೬. ನೆಲದ ಮೇಲೆ ತರ್ಪಣದ ನೀರು ಬೀಳಬಾರದು.

" ದರ್ಶನ ಕಾಲದ ಆಚರಣೆ "

ಪ್ರತಿ ತಿಂಗಳು ಅಮಾವಾಸ್ಯೆಯ ದಿನ ದ್ವಾದಶ ಪಿತೃಗಳಿಗೆ ( ೧೨ ಜನಕ್ಕೆ ) ತಿಲ ತರ್ಪಣ ಕೊಡಬೇಕು. ದ್ವಾದಶ ಪಿತೃಗಳು ಯಾರೆಂದರೆ...

೧. ಪಿತೃ ವರ್ಗ ( ೩ ) = ಪಿತೃ, ಪಿತಾಮಹ, ಪ್ರಪಿತಾಮಹ

೨. ಮಾತೃ ವರ್ಗ ( ೩ ) = ಮಾತೃ, ಪಿತಾಮಹಿ, ಪ್ರಪಿತಾಮಹಿ

೩. ಮಾತಾಮಹ ವರ್ಗ ( ೩ ) = ಮಾತಾ ಮಹ, ಮಾತು: ಪಿತಾಮಹ, ಮಾತು: ಪ್ರಪಿತಾಮಹ

೪. ಮಾತಾಮಹಿ ವರ್ಗ ( ೩ ) = ಮಾತಾಮಹಿ, ಮಾತು: ಪಿತಾಮಹಿ, ಮಾತು: ಪ್ರಪಿತಾಮಹಿ

ತಂದೆ ಅಥವಾ ತಾಯಿಯ ಪ್ರತಿವರ್ಷದ ತಿಥಿ ಮತ್ತು ಪ್ರತಿ ತಿಂಗಳ ಅಮಾವಾಸ್ಯೆ ಈ ಎರಡು ಸಂದರ್ಭಗಳು ವಿನಃ ಮಿಕ್ಕ ಇತರ ಕಾಲಗಳಲ್ಲಿ ಅಂದರೆ ಸೂರ್ಯ - ಚಂದ್ರ ಗ್ರಹಣ, ಪ್ರತಿ ತಿಂಗಳಲ್ಲೂ ಬರುವ ಸಂಕ್ರಮಣ, ಮಹಾಲಯ ಪಕ್ಷ, ಉಪಾಕರ್ಮ ಇತ್ಯಾದಿ ಪುಣ್ಯ ಕಾಲಗಳಲ್ಲಿ, ಪುಣ್ಯ ನದಿ, ತೀರ್ಥ ಕ್ಷೇತ್ರ ಮತ್ತು ಸಮುದ್ರಗಳಲ್ಲಿ ಸಮಸ್ತ ಪಿತೃಗಳಿಗೂ ತರ್ಪಣ ಕೊಡಬೇಕು.

ತಿಲ ತರ್ಪಣವನ್ನು ಮೃತರಾದವರಿಗೆ ಕೊಡಬೇಕೇ ವಿನಃ ಜೀವಂತರಿಗೆ ಕೊಡಬಾರದು.

ಮೇಲ್ಕಂಡ ೪ ವರ್ಗಗಳಲ್ಲಿ ೧ನೇಯ ವರ್ಗದಲ್ಲಿನ ಪಿತೃ ಜೀವಂತವಾಗಿದ್ದರೆ ಕರ್ತೃ ತಂದೆ ಬದುಕಿರುವವರು ಎಂದು ಕರೆಯಲ್ಪಡುತ್ತಾರೆ. ಅವರಿಗೆ ಪಿತೃ ತರ್ಪಣದಲ್ಲಿ ಅಧಿಕಾರವಿಲ್ಲ. ಆದರೆ ಬ್ರಹ್ಮಯಜ್ಞ ಮತ್ತು ಉಪಾಕರ್ಮಗಳಲ್ಲಿ...

ಭೂ ಪಿತೃ೦ ತರ್ಪಯಾಮಿ
ಭುವಃ ಪಿತೃ೦ ತರ್ಪಯಾಮಿ
ಸ್ವ: ಪಿತೃ೦ ತರ್ಪಯಾಮಿ
ಭೂರ್ಭವಸ್ವ: ಪಿತೃ೦ ತರ್ಪಯಾಮಿ

ಎನ್ನುವ ತರ್ಪಣಕ್ಕೆ ಅಧಿಕಾರ ಉಂಟು. ನಂತರ ಮೇಲೆ ಹೇಳಿದ ವರ್ಗಗಳ ಸಾಕ್ಷಾತ್ ಪಿತೃಗಳಿಗೆ ತರ್ಪಣ ಕೊಡಲು ಅಧಿಕಾರವಿಲ್ಲ!

ಮೇಲೆ ಹೇಳಿದ ೪ ವರ್ಗಗಳು ಅಂದರೆ...

೧. ಪಿತೃ ವರ್ಗ
೨. ಮಾತೃ ವರ್ಗ
೩. ಮಾತಾಮಹ ವರ್ಗ
೪. ಮಾತಾಮಹಿ ವರ್ಗ

ವರ್ಗಳಗಲ್ಲಿ ಮೃತರಾಗುವ ತನಕ ಮಿಕ್ಕವರಿಗೆ ತರ್ಪಣ ಹುಟ್ಟುವುದಿಲ್ಲ. ಉದಾಹರಣೆಗೆ...

೧. ತಂದೆ ಜೀವಂತವಾಗಿರುವ ತನಕ ತರ್ಪಣದ ಅಧಿಕಾರ ಬರುವುದಿಲ್ಲ.

೨. ತಾಯಿ ಜೀವಂತವಾಗಿರುವ ತನಕ ಮಾತೃ ವರ್ಗ ತರ್ಪಣಕ್ಕೆ ಬರುವುದಿಲ್ಲ.

೩. ಹಾಗೆಯೇ ಮಾತಾಮಹ ವರ್ಗ ಅಂದರೆ ತಾಯಿಯ ತಂದೆ ಮತ್ತು ತಾಯಿಯ ತಾಯಿ ಜೀವಂತವಿರುವ ತನಕ ಆಯಾ ವರ್ಗದವರಿಗೆ ತರ್ಪಣ ಹುಟ್ಟುವುದಿಲ್ಲ.

೪. ಇನ್ನು ಪ್ರತಿಯೊಂದು ವರ್ಗದಲ್ಲಿಯೂ ಮೊದಲಿನವರು ಮೃತರಾಗಿ ಎರಡನೇಯವರಾಗಲೀ ಅಥವಾ ಮೂರನೇಯವರಾಗಲೀ ಜೀವಂತರಾಗಿದ್ದರೆ ಅವರ ಮುಂದಿನವರಿಗೆ ತರ್ಪಣ ಕೊಡಬೇಕಾದ ವಿಚಾರವನ್ನು ವಿದ್ವಾಂಸರನ್ನು ವಿಚಾರಿಸಿ ತಿಳಿದು ಕೊಳ್ಳಬೇಕು!!

" ತರ್ಪಣ ವಿಧಿ ನಿಯಮಗಳು "

೧. ಆಚಮನ

೨. ದರ್ಭೆ ಪವಿತ್ರವನ್ನು ಬ್ರಾಹ್ಮಣರ ಕೈಯಿಂದ ಸ್ವೀಕಾರ ಮಾಡಿ ಪವಿತ್ರವನ್ನು ಧರಿಸುವ ಮುಂಚೆ ಈ ಕೆಳಕಂಡ ಮಂತ್ರವನ್ನು ಪಠಿಸಬೇಕು.

ಋಗ್ವೇದಿಗಳಿಗೆ...

ಓಂ ಪವಿತ್ರ೦ತೇ ವಿತತಂ ಬ್ರಹ್ಮಣಸ್ಪತಿ ।
ಪ್ರಭುರ್ ಗಾತ್ರಾಣಿ ಪರ್ಯಾಸು ವಿಶ್ವತಃ ।
ಅತಪ್ತತನೂರ್ನತ ದಾಮೋ ಆಶ್ನುತೇ ಶೃತಾಸ ಇದ್ವಹಂತಸ್ ತತ್ ಸಮಾಶತ ।।

ಯಜುರ್ವೇದಿಗಳಿಗೆ...

ಪವಿತ್ರವಂತಃ ಪರಿವಾಜ ಮಾಸತೇ ಪಿತೇಷಾ೦ ಪ್ರತ್ನೋ ಅಭಿರಕ್ಷತಿ ।
ವ್ರತಂ ಮಹಃ ಸಮುದ್ರಂ ವರುಣಸ್ತೀರೋ ದಧೇ ಧೀರಾ ಇಚ್ಛೇ ಕುರ್ಧರಣೇಷ್ಟಾರಭಮ್ ।।

೩. ಪುನರಾಚಮನ

೪. ಪ್ರಾಣಾಯಾಮ

೫. ದೇಶಕಾಲಾದಿ ಉಚ್ಛಾರಣೆ

೬. ಸಂಕಲ್ಪ

೭. ಮಾಸ ಸಂಕ್ರಮಣ, ಗ್ರಹಣ, ಉತ್ತರ - ದಕ್ಷಿಣಾಯನ ಪರ್ವಕಾಲದ ಸಂಕಲ್ಪ

" ತರ್ಪಣ ಕ್ರಮ "

ಕರ್ತನು ಪೂರ್ವಾಭಿಮುಖವಾಗಿ ಕುಳಿತು ಆಚಮನ ಮಾಡಿ ದೇವೀ ಗಾಯತ್ರೀ ಛಂದಃ ಎಂಬ ಮಂತ್ರವನ್ನು ಪಠಿಸಿ ದೇಶ ಕಾಲಾದಿಗಳನ್ನು ಉಚ್ಛರಿಸಿ ಸಂದರ್ಭಕ್ಕೆ ತಕ್ಕ ಸಂಕಲ್ಪ ಮಾಡಿ ಜನಿವಾರವನ್ನು ಎಡಕ್ಕೆ ಹಾಕಿಕೊಂಡು ದಕ್ಷಣಾಭಿಮುಖವಾಗಿ ತಿರುಗಿಕೊಂಡು ಬಲ ಮೊಣಕಾಲನ್ನು ನೆಲಕ್ಕೆ ಊರಿ ಬಲಗೈಯಲ್ಲಿ ತಿಲವನ್ನು ಹಾಕಿಕೊಂಡು ಉದ್ಧರಣೆಯಿಂದ ಕಲಶೋದಕವನ್ನು ಬಲಗೈಗೆ ಹಾಕಿಕೊಂಡು ಹೆಬ್ಬರಳು ಮತ್ತು ತೋರು ಬೆರಳುಗಳ ಬುಡದ ಮಧ್ಯದಿಂದ ತರ್ಪಣವನ್ನು ಮೂರುಸಲ ತರ್ಪಯಾಮಿ - ತರ್ಪಯಾಮಿ - ತರ್ಪಯಾಮಿ ಎಂದು ಕೊಡಬೇಕು.

* ಕಲಶದ ನೀರಿಗೆ ನಿರ್ಮಾಲ್ಯ ತೀರ್ಥವನ್ನು ಹಾಕಬೇಕು.

* ತರ್ಪಣವನ್ನು ನೆಲದ ಮೇಲೆ ಕೊಡಬಾರದು.

* ತರ್ಪಣ ಕೊಟ್ಟ ನೀನು ನೆಲದ ಮೇಲೆ ಬೀಳಬಾರದು.

* ತಾಮ್ರದ ಪಾತ್ರೆಯಲ್ಲಿ ತರ್ಪಣ ಕೊಡಬೇಕು.

* ಸಂದರ್ಭಾನುಸಾರ ೩, ೧೨ ಅಥವಾ ಸಮಸ್ತ ಪಿತೃಗಳಿಗೆ ತರ್ಪಣ ಕೊಟ್ಟಾಗ ಜನಿವಾರವನ್ನು ವನಮಾಲೆಯಾಗಿ ಹಾಕಿಕೊಳ್ಳಬೇಕು. ಉಳಿದಿರುವ ಎಳ್ಳು ಅಷ್ಟನ್ನೂ ಈ ಕೆಳಗಿನ ೨ ಮಂತ್ರಗಳನ್ನು ಹೇಳಿ ತರ್ಪಣ ಕೊಡಬೇಕು.

ಆಬ್ರಹ್ಮಸ್ತ೦ಭ ಪರ್ಯಂತ ಡೆತ್ ಋಷಿ ಪಿತೃ ಮಾನವಾ: ।
ತೃಪ್ತ್ಯ೦ತು ಪಿತರೇಸ್ಸರ್ವೇ ಮಾತೃ ಮಾತಾ ಮಹಾದಯಃ ।।
ಅತೀತ ಕುಲ ಕೋಟಿನಾ೦ ಸಪ್ತದ್ವೀಪ ನಿವಾಸಿನಾಮ್ ।
ಆಬ್ರಹ್ಮ ಭುವನಾಲ್ಲೋಕಂ ಇದಮಸ್ತು ತಿಲೋದಕಂ ।।

ಜನಿವಾರದ ಬ್ರಹ್ಮಗಂಟನ್ನು ಕಲಶೋದಕ ನೀರಿನಲ್ಲಿ ಅದ್ದಿ ಬಲಗಣ್ಣು ನಂತರ ಎಡಗಣ್ಣಿಗೆ ಈ ಕೆಳಗಿನ ಮಂತ್ರ ಹೇಳಿ ಒತ್ತಿಕೊಳ್ಳಬೇಕು.

ಯೇ ಕೇ ಚಾಸ್ಮತ್ ಕುಲೇ ಜಾತಾ ಅಪುತ್ರಾ ಗೋತ್ರಣೋ ಮೃತಾಃ ।
ತೇ ಗೃಹ್ಣ೦ತು ಮಯಾ ದತ್ತಂ ಸೂತ್ರ ನಿಷ್ಪೀದನೋದಕಂ ।।

ಪೂರ್ವಕ್ಕೆ ತಿರುಗಿಕೊಂಡು ಸರಿಯಾಗಿ ಪದ್ಮಾಸನದಲ್ಲಿ ಕುಳಿತುಕೊಂಡು ನಂತರ ಜನಿವಾರವನ್ನು ಬಲಕ್ಕೆ ಹಾಕಿಕೊಂಡು...

ಯಸ್ಯಾಸ್ಮೃತ್ಯಾಚ ನಾಮೋಕ್ತ್ಯಾ ತಪಃ ತರ್ಪಣ ಕ್ರಿಯಾದಿಷು ।
ನ್ಯೂನಂ ಸಂಪೂರ್ಣತಾಂ ಯಾತಿ ಸದ್ಯೋ ವಂದೇ ತಮಚ್ಯುತಂ ।।
ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ಜನಾರ್ದನಃ ।
ಯತ್ಕೃತಂತು ಮಯಾದೇವಂ ಪರಿಪೂರ್ಣ೦ ತದಸ್ತುಮೇ ।।

ಎಂದು ಹೇಳಿ..

ಅನೇನ ಶ್ರಾದ್ಧಾಂಗ ( ಶ್ರಾದ್ಧ ಮಾಡಿದಾಗ ) ತಿಲ ತರ್ಪಣೇನ ಅಥವಾ ಅನೇನ ( ಶ್ರಾದ್ಧ ಮಾಡದೇ ಇದ್ದಾಗ ) ತಿಲ ತರ್ಪಣೇನ ಪಿತೃ೦ತರ್ಯಾಮಿ ಅಥವಾ ಪಿತ್ರಾದಿ ದ್ವಾದಶ ಪಿತೃಣಾ೦ ಅಥವಾ ಪಿತ್ರಾದಿ ಸಮಸ್ತ ಪಿತೃಣಾ೦ತರ್ಗತ ಭಾರತೀ ರಮಣ ಮುಖ್ಯಪ್ರಾಣಾಂತರ್ಗತ ಶ್ರೀಮಧ್ವವಲ್ಲಭ ಜನಾರ್ದನ ವಾಸುದೇವ ಪ್ರೀಯತಾಂ ಪ್ರೀತೋ ವರದೋ ಭವತು ಶ್ರೀಕೃಷ್ಣಾರ್ಪಣಮಸ್ತು!!

ಎಂದು ಹೇಳಿ ಅಕ್ಕಿ ನೀರು ಅಥವಾ ಬರೀ ನೀರನ್ನು ಅರ್ಘ್ಯ ಪಾತ್ರೆಯಲ್ಲಿ ಬಿಡಬೇಕು.

ನಂತರ ೨ ಬಾರಿ ಆಚಮನ ಮಾಡಬೇಕು.

ಮಧ್ಯೇ ಮಂತ್ರ ತಂತ್ರ ಸ್ವರ ವರ್ಣ ಲೋಪ ದೋಷ ಪ್ರಾಯಶ್ಚಿತ್ತಾರ್ಥಂ ನಾಮತ್ರಯ ಮಂತ್ರ ಜಪಂ ಕರಿಷ್ಯೆ ।।

ಅಚ್ಯುತಾಯ ನಮಃ - ಅನಂತಾಯ ನಮಃ - ಗೋವಿಂದಾಯ ನಮಃ - ಎಂದು ೩ ಬಾರಿ,
ಅಚ್ಯುತಾನಂತ ಗೋವಿಂದೇಭ್ಯೋ ನಮಃ - ಎಂದು ೧ ಬಾರಿ ಹೇಳಬೇಕು.

ಮಂತ್ರ ಮಧ್ಯೇ ಕ್ರಿಯಾ ಮಧ್ಯೇ ವಿಷ್ಣೋ ಸ್ಮರಣ ಪೂರ್ವಕಂ ।
ಯತ್ಕಿಂಚಿತ್ ಕ್ರಿಯತೇ ಕರ್ಮ ತತ್ಕರ್ಮ ಸಫಲಂ ಕುರು ।।

ಕಾಯೇನ ವಾಚಾ ಮನಸೇಂದ್ರಿಯೈರ್ವಾ ಬುದ್ಧ್ಯಾತ್ಮನಾ ವಾ ಪ್ರಕೃತೇ: ಸ್ವಭಾವಾತ್ ।
ಕರೋಮಿ ಯದ್ಯತ್ ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯಾಮಿ ।।

" ತರ್ಪಣಕ್ಕೆ ಬರುವ ಸಮಸ್ತ ಪಿತೃಗಳು "

ಆದೌ ಪಿತಾ ತಥಾ ಮಾತಾ । ಸ ಪತ್ನೀ ಜನನೀ ತಥಾ ।
ಮಾತಾಮಹಾಸ್ಸಪತ್ನಿಕಾ: ।ಆತ್ಮಪತ್ನೀತ್ವನಂತರಂ ।।

ಸುತಾಭ್ರಾತೃಪಿತ್ರವ್ಯಾಚ್ಯ । ಮತುಲಾ ಸಹ ಭಾರ್ಯಕಾ: ।
ದುಹಿತಾ ಭಗಿನೀ ಚೈವ: ದೌಹಿತ್ರೋಭಾಗಿನೇಯಕಾ: ।।

ಪಿತೃತ್ವಸಾ ಮಾತೃಶ್ವಸಾ । ಜಾಮಾತಾ ಭಾವುಕ ಸ್ನುಷಾ ।
ಶ್ವಶುರ ಸ್ಯಾಲಕಶ್ಚ್ಯೆವ । ಶಿಷ್ಯಾಪ್ತ ಗುರು ಬಾಂಧವಾ: ।।
( ಪಾಠಾ೦ತರ ) ಸ್ವಾಮಿನೋ ಗುರುರಿಥ್ವಿನಂ ।।

ಅಂತೂ ಭಗವಂತನು ಪಂಚ ರೂಪಗಳಿಂದ ಪಿತೃಯಜ್ಞ ಮಾಡುವ ಕರ್ತೃ, ಕರ್ಮ, ಕ್ರಿಯೆಗಳಲ್ಲಿ, ಆಕಾಲದಲ್ಲಿ ಭೋಕ್ಷ್ಯ - ಭೋಜ್ಯಗಳಲ್ಲಿ ಹೀಗೆ ಎಲ್ಲಾ ಹಂತಗಳಲ್ಲಿ ಆಯಾ ನಾಮಗಳಿಂದ ( ಎಂದರೆ ಕರ್ತೃ, ಕರ್ಮ, ಕ್ರಿಯಾ, ಭೋಕ್ತಾ, ಭೋಜ್ಯ  ನಾಮಗಳಿಂದ ) ೯೬ ರೂಪಗಳಿಂದ " ಷಣ್ಣವತಿ " ಎಂಬ ನಾಮದಿಂದಲೂ ಇದ್ದು " ಪಿತೃಯಜ್ಞ " ಮಾಡಿಸುತ್ತಾನೆ!!!

ಚೇತನಾಚೇತನಗಳಲಿ ಗುರು ।
ಮಾತರಿಶ್ವಾ೦ತರ್ಗತ । ಜಗ ।
ನ್ನಾಥವಿಠಲ ನಿರಂತರದಿ ವ್ಯಾಪಿಸಿ ತಿಳಿಸಿಕೊಳ್ಳದಲೆ ।।
ಕಾತುರವ ಪುಟ್ಟಿಸಿ ವಿಷಯದಲಿ ।
ಯಾತುಧಾನರ ಮೋಹಿಸುವ । ನಿ ।
ರ್ಭೀತ ನಿತ್ಯಾನಂದಮಯ ನಿರ್ದೋಷ ನಿರವದ್ಯ ।।

Wednesday, October 7, 2015

ಸ್ಮಾರ್ಟ್ ಫೋನ್


ಇತ್ತೀಚಿಗೆ ಒಂದೆರಡು ದಿನಗಳ ಮಟ್ಟಿಗೆ  ರೈಲಿನಲ್ಲಿ  ಪ್ರಯಾಣ ಮಾಡುವ ಅವಕಾಶ ಒದಗಿ  ಬಂದಿತ್ತು .  ಯಾಕೆ ಹೀಗೆ ಹೇಳುತ್ತಿರುವೆ  ಎಂದರೆ ಅಪರೂಪಕ್ಕೆ  ಟ್ರೈನಿನಲ್ಲಿ  ಪ್ರಯಾಣ ಮಾಡುತ್ತೇವೆ ಉಳಿದಂತೆ ಬಸ್ ಪ್ರಯಾಣ ತುಂಬಾ ಇದ್ದೆ ಇರುತ್ತದೆ.   ಬೆಂಗಳೂರಿನಿಂದ  ಶಿವಮೊಗ್ಗ ಗೆ ಹೊರಡುವ ಟ್ರೈನ್ ಹೊರಡಲು ಇನ್ನು ಬಹಳ ಸಮಯ ಇತ್ತು.  ಪುಣ್ಯಕ್ಕೆ ಟ್ರೈನ್ ಕೂಡ ಖಾಲಿ ಇದ್ದಿದ್ದರಿಂದ ಸೀಟ್ ಕೂಡ ಸಲೀಸಾಗಿ ಸಿಕ್ಕಿ ಬಿಟ್ಟಿ ತ್ತು .   ನಮ್ಮ ಕಂಪಾರ್ಟ್ ಮೆಂಟಿನಲ್ಲಿ  ನಮ್ಮ ಎದುರು ಬದುರು ಒಂದು ಮುಸ್ಲಿಂ ಫ್ಯಾಮಿಲಿ ಕುಳಿತ್ತಿದ್ದರು .  ಅವರ ಇಬ್ಬರು ಮಕ್ಕಳು ಉರ್ದುವಿನಲ್ಲಿ ನನ್ನೊಂದಿಗೆ  ಮಾತನಾಡಲು ಪ್ರಯತಿಸುತ್ತಿದ್ದರು .  ನನಗೆ ಸ್ವಲ್ಪ ಮಟ್ಟಿಗೆ  ಹಿಂದಿ  ಬರುತ್ತಿದ್ದುದರಿಂದ  ಅವರೊಟ್ಟಿಗೆ  ಮಾತನಾಡುತ್ತಾ  ಪ್ರಯಾಣ  ಮಾಡಿದ್ದೆ   ಗೊತ್ತಾಗಲಿಲ್ಲ .  ಇದರ ಮಧ್ಯದಲ್ಲಿ ಕಾಫಿ  ಟೀ  , ಮದ್ದೂರ್ ವಡೆ , ಚು ರು ಮುರಿ , ಸೇವನೆ ನಡಿತಾನೆ ಇತ್ತು.   ಮಕ್ಕಳೊಂದಿಗೆ ಮಾತನಾಡುತ್ತ ಆ ಕಡೆ ಈ ಕಡೆ ಕಣ್ಣು ಹಾಯಿಸುತ್ತಿದ್ದಂತೆ ಎಲ್ಲರ ಕೈಯಲ್ಲೂ   ಸ್ಮಾರ್ಟ್ ಫೋನ್ ಕಂಡು  ಬಂತು .   ಆ ಎರದು ಮಕ್ಕಳು ಸುಮಾರು ೬ ವರುಷ ಹಾಗೂ ೯ ವರ್ಷದವರು , ೧ನೆ ಹಾಗೂ ೩ನೆ ತರಗತಿ ಅವರ ಅಪ್ಪ ಅಮ್ಮನ ಮೊಬೈಲ್ ತೆಗೆದು ಕೊಂಡು  ಗೇಮ್ಸ್ ಆಡ್ತಾ ಇದ್ದರು.                          ಇನ್ನು ಒಂದು ತಮಾಷೆ ಅಂದರೆ ಅವರ ಅಪ್ಪ ಅಮ್ಮ ನೋಡಲಿಕ್ಕೆ ಅನಕ್ಷ ರಸ್ತರು  ಎನಿಸುತ್ತಿತ್ತು .  ಇದು ಹೇಗೆ  ತಿಳಿಯಿತು ಎಂದರೆ ಅವರಿಗೆ ಕಾಲ್ ಬಂದಾಗ ಅಟೆಂಡ್ ಮಾಡಲಿಕ್ಕೆ ಗೊತ್ತಾಗುತ್ತಿರಲಿಲ್ಲ !!  ಅ ಮಕ್ಕಳೇ ಗ್ರೀನ್ ಕಲರ್ ಬಟನ್   swipe   ಮಾಡಿ ಕೊಟ್ಟು ಮಾತನಾಡಲು ಹೇಳಿ ಅವರೇ ಕಾಲ್ ಎಂಡ್ ಮಾಡಿ ನಂತರ ಆಟ ಆಡಲು ಶುರು ಮಾಡುತ್ತಿದ್ದರು .   ಆಗ ಕೇಳಿದೆ ಯಾಕೆ ಅಪ್ಪ ಅಮ್ಮನಿಗೆ ಫೋನ್ operate  ಮಾಡಲು  ಬರುವುದಿಲ್ಲವೇ ಎಂದು,  ಆ ಮಕ್ಕಳು   ನಹಿ ಜಾನತೇ ಅಂತ ಹೇಳಿದರು .  ಅದೇ ರೀತಿ ಟ್ರೈನಿನಲ್ಲಿ  ಕಡ್ಲೆಕಾಯಿ  ಮಾರುವ ಹೆಂಗಸು , ಸುಮಾರು ಜನ  ತಮಗೆ ಫೋನ್ ಉಪಯೋಗಿಸಲು ಬರದಿದ್ದರೂ  ಸ್ಮಾರ್ಟ್ ಫೋನ್ ನ ಬಳಕೆ ಎಷ್ಟರ ಮಟ್ಟಿಗೆ ಆವರಿಸಿದೆ ಎಂದು ಟ್ರೈನಿನ  ಪ್ರಯಾಣದಲ್ಲಿ ನಮಗೆ ಅರಿವಾಯಿತು .    ಒಬ್ಬಾಕೆ  ಹೂ ಕೂಡ ಮಾರಿಕೊಂಡು ನಮ್ಮ ಕಂಪಾರ್ಟ್  ಮೆಂಟಿನಲ್ಲಿ ಓಡಾಡುತ್ತಿದ್ದಳು . ಆಕೆ  ಫೋನಿನಲ್ಲಿ ಮಾತನಾಡುತ್ತಾ  ಕರೆ ಕಟ್ ಆಯಿತು.   ಆಕೆ ನನ್ನ ಮಗಳಿಗೆ ಕಾಲ್ ಹಚ್ಚಿಕೊಡಿ  ಎಂದು ತನ್ನ ಫೋನ್ ಕೊಟ್ಟಳು .    ಆಕೆಯ  ಮಗಳ ಹೆಸರು ಪಾರ್ವತೀ ಎಂದು ಕಾಂಟ್ಯಾಕ್ಟ್ಸ್  ಇಂದ ತೆಗೆದು ಅವಳ ಮಗಳಿಗೆ ಕರೆ ಮಾಡಿ ಕೊಟ್ಟೆ  .   ಅವಳು ಮಾತನಾಡಿದ  ನಂತರ ಅವಳ ಅಳಿಯನೊಡನೆ  ಮಾತನಾಡಲು ಮತ್ತೆ ನನ್ನ ಕೈಗೆ ಫೋನ್ ಕೊಟ್ಟು   ಚಂದ್ರು ಎಂದು ಹೇಳಿದಳು .  ಮತ್ತೆ ಫೋನಾಯಿಸಿ ಅವಳಿಗೆ ಕೊಟ್ಟೆ   ಕಾಲ್ ಮುಗಿದ ನಂತರ  ಒಂದು  ಥ್ಯಾಂಕ್ಸ್ ಹೇಳಲು ಮರೆಯಲಿಲ್ಲ ಆ ಹೂವಾಡಗಿತ್ತಿ ,  ಅಮ್ಮಾವ್ರೇ  ತುಂಬಾ ಥ್ಯಾಂಕ್ಸ್ ಎಂದು ಬಹಳ ಮುಗ್ದತೆ ಇಂದ  ಹೇಳಿದಳು .  ಆಗ ನನಗಾದ ಆನಂದ ಅಷ್ಟಿಷ್ಟಲ್ಲ  !   ಏನೇ ಆದರೂ  ಈ ಸ್ಮಾರ್ಟ್  ಫೋನ್ ಹಾವಳಿ ಎಲ್ಲೆಲೂ   ಹರಡಿ ತನ್ನ ಇರುವಿಕೆಯನ್ನು ರಾರಾಜಿಸುತ್ತಿದೆ  !    ಒಂದು ಸಮೀಕ್ಷೆಯ ಪ್ರಕಾರ  ಈ ೨೦೧೫ ರ  ಕೊನೆಗೆ ೨,೦೦೦ ಬಿಲಿಯನ್   users  ಇದ್ದಾರೆ ಎಂದು ತಿಳಿದು ಬಂದಿದೆ !!!!!ಜೈ  ಸ್ಮಾರ್ಟ್ ಫೋನ್   

Wednesday, September 23, 2015

ಅರಿಶಿನ ಕುಂಕುಮ


ಹಿಂದೆಲ್ಲ ಮನೆಗೆ ಯಾರೇ ಮುತ್ತೈದೆ  ಬಂದರೂ ಸಹ ಎಷ್ಟೇ ಕಡು ಬಡವರ ಮನೆಯಲ್ಲೂ  ಅರಿಶಿನ ಕುಂಕುಮ  ಹರಿವಾಣ ವನ್ನು ದೇವರ ಮನೆ ಇಂದ ತಂದು ಅರಿಶಿನ ಕುಂಕುಮ ಹೂ ಕೊಡದೆ  ಮುತ್ತೈದೆಯನ್ನು ಕಳುಹಿಸಿ ಕೊಡುತ್ತಿರಲಿಲ್ಲ.  ಮನೆಗೆ  ಮುತ್ತೈದೆ  ಬಂದರೆ ಲಕ್ಷ್ಮಿ ಬಂದಂತೆ ಎಂದು ನಮ್ಮಮ್ಮ ಯಾವಾಗಲು ಹೇ ಳು ತ್ತಿದ್ದರು .  ಒಂದು ಸ್ಟೀಲ್ ತಟ್ಟೆ  ಅದರಲ್ಲಿ ಎರಡು ಸ್ಟೀಲ್ ಅರಿಶಿನ ಕುಂಕುಮದ ಬಟ್ಟಲು ದೇವರ ಮುಂದೆ  ಸದಾ ಇರುತ್ತಿತ್ತು.   ಅಮ್ಮ ಅಕ್ಕ ಪಕ್ಕ ಮನೆಯವರು ನೆಂಟರಿಷ್ಟರು  ಯಾರೇ ಬಂದರು ಕುಂಕುಮ ಹೂ ಕೊಡುತ್ತಿದ್ದರು .  ನೆಂಟರಿಷ್ಟರು ಬಂದರೆ ತಾಂಬೂಲ  ಕೊಡಬೇಕಾಗುತಿತ್ತು .  ಆದರೆ ಆಗಿನ ಪರಿಸ್ತಿತಿ ಅಷ್ಟೊಂದು ಚೆನ್ನಾಗಿರಲಿಲ್ಲ  ಅಗ ಅಮ್ಮ ತುಂಬಾ ಬೇಸರ ಪಟ್ಟು ಕೊಂಡಿದ್ದುಂಟು .   ಬಂದವರಿಗೆ  ಒಂದೊಳ್ಳೆ   ರೀತಿ  ಆದರಿಸಲಾಗಲಿಲ್ಲ , ನಮ್ಮ ಸ್ತಿತಿ ಸುಧಾರಿಸು ಭಗವಂತ  ಎಂದು ಪ್ರತಿನಿತ್ಯ  ಎರಡು ಹೊತ್ತು ದೇವರಿಗೆ ದೀಪ ಹಚ್ಚುವಾಗ ಬೇಡಿ ಕೊಂಡು  ನಮ್ಮಗಳ ಕೈಲಿ ಕೂಡ ಪ್ರತಿ ನಿತ್ಯ ದೇವರ ನಾಮಗಳನ್ನು ಹಾಡಿಸಿ ಬೇಡಿ ಕೊಳ್ಳುವಂತೆ  ಹೇಳುತ್ತಿದ್ದರು .  ನಾವು ಕೂಡ ಅಷ್ಟೇ ಭಕ್ತಿ ಇಂದ ದೇವರಲ್ಲಿ ನಮ್ಮ ಮೊರೆ  ಕೇಳಿಸದೆ  ಭಗವಂತ ಎಂದು ಅವನ ನ್ನು    ಪ್ರಶ್ನಿಸುತ್ತಿದ್ದೆವು.

ಆದರೆ ಬೇಸರದ ಸಂಗತಿ ಎಂದರೆ ಈಗ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಬೆಳ್ಳಿಯ ಹಾರಿವಾಣ  ಅದರಲ್ಲಿ ಬೆಳ್ಳಿಯ ಬಟ್ಟಲಿನಲ್ಲಿ ಅರಿಶಿನ ,ಕುಂಕುಮ,  ಚಂದನ, ಅಕ್ಷತೆ , ಗಂಧ  ಇವೆಲ್ಲವೂ ಸಾಲಂಕೃತ  ವಾಗಿ ಜೋಡಿಸಿಟ್ಟಿ ರುತ್ತಾರೆ  ಆದರೆ ಅದೆಲ್ಲ ಹಬ್ಬ ಹುಣ್ಣಿಮೆಗಳಂದು  ಆಹ್ವಾನಿತ  ಮುತ್ತೈದೆ ಯರಿಗೆ ನೀಡುತ್ತಾರೆ .   ಉಳಿದಂತೆ ಬೇರೆ ದಿನಗಳಲ್ಲಿ  ಯಾರೇ ಮುತ್ತೈದೆ  ಬಂದರೂ ಅದರಲ್ಲೂ ಮಂಗಳವಾರ , ಶುಕ್ರವಾರಗಳೇ ಆಗಲಿ  ಬರಿದೆ ಮಾತನಾಡಿಸಿ ಕಳುಹಿಸುತ್ತಾರೆ .   ಆದರೆ ನಮ್ಮ ಮನೆಗಳಲ್ಲಿ ಅರಿಶಿನ ಕುಂಕುಮ ಹೂ ಕೊಡದೆ  ಮುತ್ತೈದೆಯರನ್ನು  ಹಾಗೆ ಕಳುಹಿಸುವುದಿಲ್ಲ .  ಈ ಗಲೂ  ನಮ್ಮ ತಾಯಿ ಹೇಳಿ ಕೊಟ್ಟಿದ್ದನ್ನು  ಚಾಚೂ ತಪ್ಪದೆ ಪಾಲಿಸುತ್ತಾ  ಬರುತ್ತಿದ್ದೇವೆ .  ಆ ಭಗವಂತನ ಕರುಣೆ ಇಂದ ಈಗಲೂ ಇಂತಹ ಸು ಸಂಸ್ಕಾರಗಳನ್ನು   ನಡೆಸಿ ಕೊಂಡೆ ಹೋಗುತ್ತಿದ್ದೇವೆ .   ಯಾಕ್ ಹೀಗೆ ನಮ್ಮ ಜನ ಒಳ್ಳೆಯ ಸಂಪ್ರದಾಯ ಗಳನ್ನ ಬಿಡುತ್ತ ಬರುತ್ತಿದ್ದಾರೆ .  ಈ ಬೆಳವಣಿಗೆಗಳು  ಶುಭ ಸೂಚಕವಲ್ಲ .   ಕೆಲವು  ಹೆಂಗಸರಂತೂ  ಹಣೆಗೆ ಕುಂಕುಮ ಇಲ್ಲಾ  , ತಲೆಗೆ ಹೂ ಮುಡಿ ಯುವುದಿಲ್ಲ,  ಕಾಲಿಗೆ ಕಾಲುಂಗರ ತೊಡುವುದಿಲ್ಲ , ಕೈಗಳಿಗೆ ಬಳೆಗಳನ್ನು  ಕೇಳಲೇ ಬೇಡಿ .   ನಾನು ತಲೆ ತುಂಬಾ ಹೂ ಮುಡಿದು , ಕೈ ತುಂಬಾ ಗಾಜಿನ ಬಳೆ ಗಳನ್ನೂ ತೊಟ್ಟಿದ್ದರೆ  ನನ್ನ ಮಕ್ಕಳೇ ''ಅಮ್ಮ ಈ ರೀತಿ ಬಂದರೆ ನಿನ್ನನ್ನು ಹಳ್ಳಿ ಗಮಾರಿ  ಅಂತ ತಿಳ್ಕೋತಾರೆ ಎಲ್ಲರೂ ,  ಹೂ ಒಂದೇ ಒಂದು ಮುಡ್ ಕೊ , ಎರಡೆರಡು ಬಳೇ ಗಳು ಸಾಕು , ಇದೆಲ್ಲ ಪಾರ್ಟಿ manners  ಅಮ್ಮ ತಿಳ್ಕೊ  ಅನ್ತಾರೆ;    ದೇವಸ್ತಾನಕ್ಕೆ  ಬೇಕಾದರೆ ನಿನ್ನ ಇಷ್ಟ ಬಂದಂತೆ  ಉಡು , ತೊಡು  ಓಕೆ ಅಂತಾರೆ '' .  ಶ್ರೀ ಹರಿ ಇದೇನಪ್ಪ ನಮ್ಮ ಮುಂದಿನ ಪರಂಪರೆಗೆ ಇವೆಲ್ಲ ಹೊರಟೆ ಹೋಗುತ್ತೆ ಅಂತ ಭಯ ಹುಟ್ಟುತ್ತಿದೆ !!!    ಆರೇ ಎಫ್ ಎಮ್  ನಲ್ಲಿ  ಇದೆ ಹಾಡೇ ಬರ ಬೇಕೇ ನನ್ನ ಅದೃಷ್ಟಕ್ಕೆ ''ಹೆಣ್ಣು  ಎಂದರೆ ಹೇಗಿರಬೇಕು ?  ಹಣೆ ಯಲ್ಲಿ ಕುಂಕುಮ ಧರಿಸಿರಬೇಕು ,  ಅರಿಶಿನ ಕೆನ್ನೆಯ ತುಂಬಿರ ಬೇಕು , ಮೈ ತುಂಬಾ ಸೆರಗನ್ನು ಹೊದ್ದಿರಬೇಕು '' ಅಣ್ಣಾವ್ರ ಹಾಗೂ ಮುದ್ದು ಮೊಗದ ಭಾರತಿಯ  ಆ ಜೋಡಿ ಅದೆಷ್ಟು ಸುಂದರ !  ನೆನಪುಗಳೇ ಅತಿ ಮಧುರ ಅಲ್ಲವೇ ?

ಜಯ ದೇವ ಜಯ ದೇವ ಶ್ರೀ ಗಣಪತಿ ರಾಯ






ಧಾರ್ಮಿಕತೆಯ  ಹೆಸರಿನಲ್ಲಿ ಮಾನವೀಯತೆ ಮೆರೆದ ಗೋಕಾಕ್ ನಲ್ಲೊಂದು ಗಣಪತಿ  ಯುವಕ ಸಂಘದಿಂದ ಸ್ಮಶಾನ ಕಾಯುವ ಸೋಮಯ್ಯ  ಪೂಜಾರಿ ಎಂಬವವರಿಗೆ ನಾಲಕ್ಕೂ  ಲಕ್ಷ ರೂಪಾಯಿಗಳಿಂದ ಒಂದು ಸುಂದರ ಗೃಹವನ್ನು ನಿರ್ಮಿಸಿ ಗಣಪತಿ ಹಬ್ಬದಂದು ಅವರಿಗೆ ಹಸ್ತಾಂತರಿಸಿದ ಒಂದು ಘಟನೆಯನ್ನು ಖಾಸಗಿ ಚಾನೆಲ್ ಒಂದರಲ್ಲಿ ನೋಡಿ ಹೃದಯ ತುಂಬಿ ಬಂತು . ೪ ಹೆಣ್ಣು ಮಕ್ಕಳ ತಂದೆ ಯಾದ ಸೋಮಯ್ಯ ನವರು ಪತ್ನಿ ಮತ್ತು ಪುತ್ರಿಯರೊಡನೆ  ಸ್ಮಶಾನ ಕಾಯುವ ಕಾಯಕದಿಂದ ಜೀವನ ನಡೆಸುತ್ತಿದ್ದರು .  ಅವರಿಗೆ ಸೂರು ಕಲ್ಪಿಸಿ ಹೆಂಡತಿ ಮಕ್ಕಳೊಡನೆ ನೆಮ್ಮದಿಯ  ಬಾಳು ನಡೆಸುವಂತೆ  ಮಾಡಿ ಕೊಟ್ಟ ಗಣಪತಿ ಯುವಕ ಸಂಘದವರು ಕಳೆದ ೨೬ ವರುಷಗಳಿಂದ ಈ ರೀತಿ ಸಮಾಜಮುಖಿ ಕಾರ್ಯಕ್ರಮಗಳನ್ನು ಮುಂದುವರಿಸಿ ಕೊಂಡು  ಬರುತ್ತಿದ್ದಾರೆ .  ಅವರು ಇದೆ ರೀತಿಯ ಒಳ್ಳೊಳ್ಳೆ  ಯೋಜನೆಗಳನ್ನು ಆಯೋಜಿಸಿ ಅರ್ಹರಿಗೆ ಈ ರೀತಿ ಸಹಾಯ ಹಸ್ತ ಚಾಚುತ್ತಿರುವುದು ಪ್ರಶಂಸನೀಯ .  ಆ ವಿಘ್ನ ವಿನಾಶಕ  ಗಜಮುಖನು ಇವರ ಈ  ಸಮಾಜಮುಖಿ ಕಾರ್ಯಗಳಿಗೆ ಇನ್ನು ಹೆಚ್ಚಿನ ಹಣವನ್ನು , ಸಹಕಾರವನ್ನು ಅಲ್ಲಿನ ಜನರಿಂದ ಒದಗಿಸಿ ಅರ್ಹರಿಗೆ ಸೂರು ಇಲ್ಲದವರಿಗೆ ದೀನರಿಗೆ ಒಂದು ಸೂರು ದೊರಕಿಸಿ ಕೊಡುವಂತೆ ಆಶಿರ್ವಾದ ನೀಡಲಿ.  ಇಂತಹ ಸಂಘಗಳು ಅತಿ ಹೆಚ್ಚಿನ ಸಂಖೆಯಲ್ಲಿ  ಮುಂದೆ ಬರಲಿ.   ಧಾರ್ಮಿಕತೆಯ  ಹೆಸರಿನಲ್ಲಿ  ಆಡಂಬರ ದ ಸದ್ದು ಗದ್ದಲ ತೋರದೆ ಇವ ರುಗಳು ನಡೆದ ಹಾದಿಯಲ್ಲಿ,  ಎಲ್ಲ ಸಂಘಗಳು ಇದನ್ನು ಆದರ್ಶವಾಗಿ ಟ್ಟು  ಕೊಂಡು ಮುಂಬರುವ  ದಿನಗಳಲ್ಲಿ ಈ ರೀತಿ ಕೈಂಕರ್ಯ ಗಳನ್ನ ಮುಂದುವರಿಸಿ ಕೊಂಡು ಹೋದಲ್ಲಿ ನಮ್ಮದು ರಾಮ ರಾಜ್ಯ ವಾಗುವುದರಲ್ಲಿ ಸಂದೇಹವೇ ಇಲ್ಲ .    ಜಯ ದೇವ ಜಯ ದೇವ ಶ್ರೀ ಗಣಪತಿ ರಾಯ ಜಯ ಗಣಪತಿ ರಾಯ ಜಯ ಕಾರಕ ಭಾವ ಹಾರಕ ಓಂಕಾರ ಕಾಯ : ಜಯ ದೇವ ಜಯ ದೇವ ಜಯ ದೇವ ಜಯ ದೇವ . ಸಾರ್ವ  ಜನಿಕರು ಇಂತಹ ಕಾರ್ಯಗಳಿಗೆ ತಮ್ಮ ಒಪ್ಪಿಗೆ ಸೂಚಿಸುವದರ ಮೂಲಕ  ಇದನ್ನು ಲೈಕಿ ಸ ಬೇಕಾಗಿ ಕೋರಿಕೆ .  

Tuesday, August 25, 2015

ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಅಮಾಯಕರಂತೆ ನಡೆದು ಕೊಂಡು ನಮ್ಮ ಮನಸ್ಸು ಗೆಲ್ಲುತ್ತಾರೆ
ತಮ್ಮ ಬೇಳೆ ಬೆಂದ ನಂತರ ಅವರ ರಿಯಲ್ ಸ್ವರೂಪ ತೋರಿಸುತ್ತಾರೆ !! ಎಂತಹ ಜನರಿವರು

ಒಳ್ಳೆಯವರಿಗಿದು ಕಾಲವಲ್ಲ ಶ್ರೀ ಹರಿ ನೀನೆ ಕಾಪಾಡ ಬೇಕು

ಇಷ್ಟು ಕೊಟ್ಟರೆ ಅಷ್ಟು ಬೇಕೆಂಬರು , ಅಷ್ಟು ಕೊಟ್ಟರೆ ಮತ್ತಷ್ಟು ಬೇಕೆಂಬರು , ಬೆರಳು ಕೊಟ್ಟರೆ ಹಸ್ತ  ನುಂಗಿದರು ಎಂಬಂತೆ

ಈ ಕಾಲದಲ್ಲಿ ಯಾರಿಗೂ ಸಹಾಯ ಮಾಡಬಾರದು ಅನ್ನಿಸುತ್ತೆ ಯಾಕೆಂದ್ರೆ ಸಹಾಯ ಯಾಚಿಸುತ್ತಾ ಬರುವವರು ನಮ್ಮಿಂದ ಸಹಾಯ ಪಡೆದ ನಂತರ ನಮ್ಮನ್ನು ತಿರುಗಿ ಕೂಡ ನೋಡುವುದಿಲ್ಲ  ಎಂತಹ ವಿಪರ್ಯಾಸ 

Wednesday, August 19, 2015



ಹೀಗೊಂದು ಪ್ರಹಸನ :

ಈಗ್ಗೆ ಮೂರು ವರುಷಗಳ ಹಿಂದೆ ಇದೆ ದಿನದಂದು ಅಂದ್ರೆ ನಾಗರ ಪಂಚಮಿ ದಿನದಂದು ನನ್ನ ಕಸಿನ್ ಮಗ ಅನಿರುದ್ಹ್ ಅಂತ ನಮ್ಮ ಮನೆಯಲ್ಲಿ ಇರುತ್ತಿದ್ದ ಸಮಯವದು, ಅಂದ್ರೆ ಆಗಿನ್ನೂ UKG  ಓದುತ್ತಿದ್ದ .  ಅವರ ಅಪ್ಪ ಅಮ್ಮ ಇಬ್ಬರು ಐ ಟಿ ಕಂಪನಿ ಉದ್ಯೋಗಿಗಳು ಅವರು ಆಫೀಸ್ ಬಂದ ನಂತರ ಅವರ ಜೊತೆ ಮಲಗಲು ಹೋಗುತ್ತಿದ್ದ ಅಂದರೆ ಅವನ ಊಟ ತಿಂಡಿ ರಾತ್ರಿ ಊಟ ಎಲ್ಲ ನಮ್ಮ ಮನೆಯಲ್ಲೇ ಆಗುತ್ತಿತ್ತು .     ಆಗ ಅವನಿಗೆ ಸುಮಾರು ೪ ವರುಷ ಇರಬಹುದು.  ವಿಪರೀತ ತುಂಟ , ತಂಟೆಕೋರ ಅವ.  ಆದರೆ ಊಟದ ವಿಷಯದಲ್ಲಿ ಎಂತದ್ದು ತಂಟೆ ಇರಲಿಲ್ಲ.  ಎಲ್ಲ ರೀತಿ ತಿಂಡಿ ಊಟ, ಹಣ್ಣು, ತರಕಾರಿ ಎಲ್ಲವನ್ನು ತಿನ್ನುತ್ತಿದ್ದ .  ಊಟದ ವಿಷಯದಲ್ಲಿ ಎಷ್ಟು ಅಚ್ಚು ಕಟ್ಟು ಅಂದರೆ ಹಬ್ಬ-ಹರಿದಿನ  ಹುಣ್ಣಿಮೆ- ಸಂಕಷ್ಟಿ  ದಿನಗಳಂದು ಅವನಿಗೆ ಊಟದ ಜೊತೆ ಜೊತೆಗೆ ಪಲ್ಯಗಳು, ಕೋಸಂಬರಿ, ಪಾಯಸ , ಹಪ್ಪಳ ಸಂಡಿಗೆ ಉಪ್ಪಿನಕಾಯಿ , ಗೊಜ್ಜಿನ ಚಿತ್ರಾನ್ನ, ಹಬ್ಬದ ಅಡಿಗೆ ಅಗ ಬೇಕು.   ಮೂರು ವರುಷಗಳ ಹಿಂದೆ ಇದೆ ನಾಗರ ಪಂಚಮಿ ದಿನದಂದು ಆವ ಹೇಳಿದ್ದು ಹೀಗೆ '' ಉಮ ಅಂಟಿ ನೀವು ನಾಗಪ್ಪನಿಗೆ ತನಿ ಎರೆದು ಆದ ಮೇಲೆ , ನಿಮ್ಮ ಪೂಜೆ ಎಲ್ಲಾ ಮುಗಿದ ನಂತರ'   ತಿಂಡಿ ತೀರ್ಥ ಅಂತ ಟೈಮ್ ವೇಸ್ಟ್ ಮಾಡ ಬೇಡಿ , ಯಾಕಂದ್ರೆ ಈ ದಿನ ಹಬ್ಬ ಅಡುಗೆ ಆಗಬೇಕು ಅದಕ್ಕೆ ಬೇಗ ಬೇಗ ಕುಕ್ಕರ್ ಇಟ್ ಬಿಡಿ , ಕೋಸಂಬರಿ ಮಾಡೋಕೆ ಸೌತೆಕಾಯಿ ಹಚ್ಚಿ ಕೊಡ್ತೀನಿ, ತೆಂಗಿನ ಕಾಯಿ ನಾನೇ ತುರಿದು ಕೊಡ್ತೀನಿ ನೀನೇನು ಯೋಚನೆ ಮಾಡಬೇಡ ಉಮ ಆಂಟಿ ನಾನ್ ನಿಂಗೆ ಹೆಲ್ಪ್ ಮಾಡ್ತೀನಿ, ಬೇಗ ಬೇಗ ಅಡುಗೆ ಮಾಡಿ ಅಂಕಲ್ ಗೆ, ಅಣ್ಣಂದಿರಿಗೆ ಊಟ ಮಾಡಿಕೊಂಡು ಆಫೀಸಿಗೆ ಹೋಗಲು ಹೇಳು ಆಮೇಲೆ ನಿಧಾನ ವಾಗಿ ಒಂದೊಂದೇ ಉಂಡೆ ಅಂದ್ರೆ ರವೆ ಉಂಡೆ, ಪುರಿ ಉಂಡೆ, ಎಳ್ಳಿನ ಉಂಡೆ ,ಚಕ್ಕುಲಿ ಎಲ್ಲ ಮಾಡೋಣ ನಮ್ ಅಜ್ಜಿ ಇದೆಲ್ಲ ಮಾಡ್ತಾರೆ .  ನೀನು ಮಾಡು ಉಮ ಆಂಟಿ ಅಂತ ಪೀಡಿಸ್ತ  ಇದ್ದ.  ನಾನು ''ಅಲ್ಲ ಪುಟ್ಟು ಇದೆಲ್ಲ ಅಜ್ಜಿ ಮಾಡ್ತಾರೆ ಕಣೋ ನಂಗೆ ಇವೆಲ್ಲ ಅಷ್ಟೊಂದು ಚೆನ್ನಾಗಿ ಮಾಡಲು ಬರೋಲ್ಲ '' ಅಂತ ಹೇಳಿದೆ.  ಅವನು ಕೇಳಬೇಕಲ್ಲ '' ನಂಗೆ ಅದೆಲ್ಲ ಗೊತ್ತಿಲ್ಲ ಅವೆಲ್ಲ ಮಾಡಿದ್ರೆನೇ ನಾನು ಊಟ ಮಾಡೋದು ಹೋಗು' ಅಂತ ಮುಖ ಓದಿಸಿಕೊಂಡು ಕುಳಿತ ಕಡೆಗೆ ಹೋಗಿ ಮಲ್ನಾಡ್ ಸ್ಟೋರ್ಸ್ ನಿಂದ ಅವನಿಗೆ ಏನೆಲ್ಲಾ ಬೇಕೋ ಅವೆಲ್ಲಾ  ಕೊಂದು ತಂದು , ಬಾಲೆ ಎಲೆ ಮೇಲೆ ಎಲ್ಲ ಬಡಿಸಿದ ಮೇಲೆ ಈ ಅಚ್ಚ ಕಟ್ ಬ್ರಾಹ್ಮಣ ಚೆನ್ನಾಗಿ ಊಟ ಮಾಡಿ ಎಲ್ಲವನ್ನು ತಿಂದು ತೇಗಿ ತೃಪ್ತನಾದ .  ನಂತರ ಉಮ ಅಂಟಿ ಒಂದು ಬಾಲೆ ಹಣ್ಣು ಕೊಡು ಎಂದು ತಿಂದು ಕೈ ಬಾಯಿ ತೊಳೆದು ಕೊಂಡು ಕಣ್ತುಂಬಾ ನಿದ್ದೆ ಮಾಡಿ ಸಂಜೆ ನಾಲ್ಕು ಘಂಟೆಗೆ ಎದ್ದ ಈ ಪುಣ್ಯಾತ್ಮ !!!! ನನಗೆ ಈ ದಿನ ಅನಿರುಧ್ ನೆನಪು ಬಹಳ ಬಂತು ಅವನು ಈಗ ಬೆಂಗಳೂರಿನಲ್ಲಿ ಇಲ್ಲಾ ನೆನೆಸಿಕೊಂಡಾಗ  ನೋಡಲು ಚಿಕ್ಕಮಂಗಳೂರಿನ  ಕಡುರಿಗೆ ಹೋಗಬೇಕು :)